ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಒಳಗಾಗಿರುವ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು, ಮಂಗಳವಾರ ಬೆಳಿಗ್ಗೆ ಮೂವರು ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಶೋಧಿಸಿದ್ದಾರೆ.
ಬೆಳಗಾವಿ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಕಚೇರಿ ತನಿಖಾ ದಳ– 3ರ ಸಹಾಯಕ ನಿಯಂತ್ರಕ ಸುಭಾಷ ಸುರೇಂದ್ರ ಉಪ್ಪಾರ, ಬಾಗಲಕೋಟೆ ಭೂ ದಾಖಲೆಗಳ ಉಪನಿರ್ದೇಶಕ ಗೋಪಾಲ ಮಾಲಗತ್ತಿ ಹಾಗೂ ಕಲಬುರ್ಗಿ ಮತ್ತು ಯಾದಗಿರಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ಅವರ ಮನೆ ಮತ್ತು ಕಚೇರಿಗಳನ್ನು ಜಾಲಾಡಲಾಗಿದೆ.
ಬೆಳಗಾವಿ ರುಕ್ಮಿಣಿ ನಗರದ ಉಪ್ಪಾರ ಅವರ ಮನೆ, ಬೆಳಗಾವಿ ಜಿಲ್ಲೆಯ ಬಸವನ ಕುಡಚಿಯಲ್ಲಿರುವ ಸಹೋದರನ ಮನೆ, ಇದೇ ಗ್ರಾಮದಲ್ಲಿರುವ ಅಳಿಯನ ಮನೆ ಹಾಗೂ ಬೆಳಗಾವಿ ಮಾಪನ ಭವನದಲ್ಲಿರುವ ಇವರ ಕಚೇರಿಗಳಲ್ಲಿ ಎಸಿಬಿ ಅಧಿಕಾರಿಗಳು ಹಣ, ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಾಗಿ ಹುಡುಕಾಡಿದ್ದಾರೆ.
ಕೊಪ್ಪಳದ ಜೆ.ಎಚ್. ಪಟೇಲ್ ನಗರದಲ್ಲಿರುವ ಮಾಲಗತ್ತಿ ಅವರ ಮನೆ, ಬಾಗಲಕೋಟೆ ಅಧಿಕೃತ ವಸತಿ ಗೃಹ, ಬಾಗಲಕೋಟೆ ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿ, ಮಾಲಗತ್ತಿ, ವಿಜಯಪುರ ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿಯ ಪ್ರಭಾರ ಅಧಿಕಾರ ಹೊಂದಿದ್ದು ಅಲ್ಲೂ ತಡಕಾಡಲಾಗಿದೆ.
ಜಗದೇವಪ್ಪ ಅವರ ಕಲಬುರ್ಗಿ ಮತ್ತು ಯಾದಗಿರಿಯ ಕಚೇರಿ, ಕಲಬುರ್ಗಿ ಪೂಜಾ ಕಾಲೋನಿಯ ಮನೆ ಮತ್ತು ಸಿಟಿ ಸ್ಕ್ವೇರ್ ಕಾಂಪ್ಲೆಕ್ಸ್ನಲ್ಲಿರುವ ಅಂಗಡಿಯನ್ನು ಶೋಧಿಸಲಾಗಿದೆ. ಎಸಿಬಿ ಅಧಿಕಾರಿಗಳನ್ನೊಳಗೊಂಡ ವಿವಿಧ ತಂಡಗಳು ಏಕಕಾಲಕ್ಕೆ ಈ ದಾಳಿ ನಡೆಸಿವೆ.