ಬೆಂಗಳೂರು: ಪರಿಷತ್ತಿನ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಬಳಸಿದ ಏಕವಚನವು ಬಿಜೆಪಿ ಸದಸ್ಯರನ್ನು ರೊಚ್ಚಿಗೇಳಿಸಿದ್ದರಿಂದ ಕಲಾಪವು ಘರ್ಷಣೆಯ ಕಡೆಗೆ ಹೊರಳಿದ ಸ್ಥಿತಿ ನಿರ್ಮಾಣವಾಯಿತು.
ಸಭಾಪತಿ ಪೀಠದ ಎದುರು ನುಗ್ಗಿದ ವಿರೋಧಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್ ಹಾಗೂ ತುಳಸಿ ಮುನಿರಾಜಗೌಡ ಅವರು, ಜಬ್ಬಾರ್ ಅವರನ್ನು ಉದ್ದೇಶಿಸಿ ಏಕ ವಚನ ಬಳಸಿದ್ದನ್ನು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಸಚಿವರು, ಕಾಂಗ್ರೆಸ್ ಸದಸ್ಯರು ಜಬ್ಬಾರ್ ಬೆಂಬಲಕ್ಕೆ ನಿಂತರು. ಬಿಜೆಪಿ ಸದಸ್ಯರೆಲ್ಲರೂ ಸಭಾಪತಿ ಪೀಠದ ಎದುರು ಧಾವಿಸಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಮಾರ್ಷಲ್ ಮುಖ್ಯಸ್ಥರು ತಮ್ಮ ಸಹೋದ್ಯೋಗಿಗಳನ್ನು ಕರೆಯಿಸಿ ಸಭಾಪತಿ ಪೀಠದ ಸುತ್ತ ಭದ್ರತಾಕೋಟೆ ಕಟ್ಟಿ ಯಾರೊಬ್ಬರು ಮುಂದೆ ಸಾಗದಂತೆ ನಿರ್ಬಂಧಿಸಿದರು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು. ಬಳಿಕ ಕೆಲಹೊತ್ತು ವಾಗ್ವಾದ ನಡೆಯುತ್ತಲೇ ಇತ್ತು. ಕೆಲ ಹೊತ್ತಿನ ನಂತರ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು.