'ಬಡವರಿಗೆ ಅಕ್ಕಿ ಕೊಡಬಾರದು ಎಂದು ಹೇಳುವ ನೀಚ ಬುದ್ಧಿ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಇವರಂತೆ ನೀಚ ರಾಜಕಾರಣ ಮಾಡಿ ಬಡವರ ಹೊಟ್ಟೆಗೆ ಹೊಡೆಯುವುದಿಲ್ಲ. ದೇಶದಲ್ಲಿ ಆಹಾರ ಭದ್ರತೆಗಾಗಿ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಿದೆ' ಎಂದು ಸಂಸದ ಡಿ.ವಿ.ಸದಾನಂದ ಗೌಡ ಚಾಮರಾಜನಗರದಲ್ಲಿ ಗುರುವಾರ ಹೇಳಿದರು. 'ಅಕ್ಕಿ ಮಾರಾಟ ಮಾಡಬಾರದು ಎಂಬ ನಿರ್ಧಾರ ಕೇವಲ ಕರ್ನಾಟಕಕ್ಕೆ ಮಾತ್ರ ಮಾಡಿದ್ದಲ್ಲ. ಇಲ್ಲಿ ಹೊಸದಾಗಿ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲೇ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಅದು' ಎಂದು ಸ್ಪಷ್ಟಪಡಿಸಿದರು.