ಬೆಂಗಳೂರು: ರಾಜ್ಯದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ₹61 ಸಾವಿರ ಕೋಟಿ ಮೊತ್ತದ ಹೂಡಿಕೆಯ ಒಡಂಬಡಿಕೆಗೆ ಹಲವು ಸಂಸ್ಥೆಗಳು ಸಹಿ ಹಾಕಿದ್ದು, ಇದರಿಂದ ರಾಜ್ಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 12 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ‘ವಿಂಡರ್ಜಿ 2022’ ಸಮ್ಮೇಳನದಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವಾರು ಹೂಡಿಕೆದಾರರು ₹61,000 ಕೋಟಿ ಮೊತ್ತದ ಎಕ್ಸ್ಪ್ರೆಶನ್ ಆಫ್ ಇಂಟರೆಸ್ಟ್ಗೆ ಸಹಿ ಹಾಕಿದ್ದಾರೆ. ರಾಜ್ಯದ ಇಂಧನ ಇಲಾಖೆ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊಪ್ಪಳ, ಗದಗ, ದಾವಣರೆಗೆರೆ, ಚಿತ್ರದುರ್ಗ, ವಿಜಯನಗರ, ತುಮಕೂರು, ಬಾಗಲಕೋಟೆ ಭಾಗದಲ್ಲಿ ಹೂಡಿಕೆಯಾಗಿ ಉದ್ಯೋಗ ಸೃಷ್ಟಿಯಾಗಲಿದೆ. 9,218 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ ಎಂದರು.
ರಿನ್ಯೂ, ಟೊರೆಂಟ್, ಇಡಿಎಫ್ ರಿನ್ಯೂಬಲ್ ನಂತಹ ಖ್ಯಾತ ಕಂಪನಿಗಳು ಎಕ್ಸ್ಪ್ರೆಶನ್ ಆಫ್ ಇಂಟರೆಸ್ಟ್ಗೆ ಸಹಿ ಮಾಡಿವೆ. ಇಂಡಿಯನ್ ವಿಂಡ್ ಟರ್ಬೈನ್ ಮ್ಯಾನ್ಯುಫಾಕ್ಚರರ್ಸ್ ಅಸೋಸಿಯೇಶನ್ ಮತ್ತು ಪಿಡಿಎ ಟ್ರೇಡ್ ಫೇರ್ಸ್ ಪ್ರೈವೇಟ್ ಲಿಮಿಟೆಡ್ ಮೂರು ದಿನಗಳ ಸಮ್ಮೇಳನ ಆಯೋಜಿಸಿದೆ.