ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆಯವರ ಕಾವ್ಯ ಬೆಲ್ಲದ ಉಂಡೆ ಇದ್ದಂತೆ: ಜಿ.ಬಿ.ಹರೀಶ

‘ಅಂಬಿಕಾತನಯದತ್ತರ ಕನ್ನಡ ಮೇಘದೂತ-ಒಂದು ಸಹಪಯಣ’ ಪುಸ್ತಕ ಬಿಡುಗಡೆ
Last Updated 31 ಜನವರಿ 2022, 17:11 IST
ಅಕ್ಷರ ಗಾತ್ರ

ಬೆಂಗಳೂರು: ‘ಬೇಂದ್ರೆಯವರ ಕಾವ್ಯ ಬೆಲ್ಲದ ಉಂಡೆ ಇದ್ದಂತೆ.ಅದನ್ನು ಯಾವ ಭಾಗದಿಂದ ಕಚ್ಚಿದರೂ ಸಿಹಿ ನೀಡುತ್ತದೆ’ ಎಂದು ಲೇಖಕ ಜಿ.ಬಿ.ಹರೀಶ ಅಭಿಪ್ರಾಯಪಟ್ಟರು.

ವರಕವಿ ಬೇಂದ್ರೆಯವರ 126ನೇ ಜನ್ಮದಿನದ ಅಂಗವಾಗಿದ.ರಾ.ಬೇಂದ್ರೆ ಕಾವ್ಯ ಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿ.ಕೃಷ್ಣಪ್ಪ ಮತ್ತು ಟಿ.ಎನ್.ವಾಸುದೇವಮೂರ್ತಿ ಅವರ ‘ಅಂಬಿಕಾತನಯದತ್ತರ ಕನ್ನಡ ಮೇಘದೂತ-ಒಂದು ಸಹಪಯಣ’ ಪುಸ್ತಕ ಬಿಡುಗಡೆ ಮಾಡಿ ಸೋಮವಾರ ಮಾತನಾಡಿದರು.

‘ಬೇಂದ್ರೆ ಅವರು ಕನ್ನಡ ಕಾವ್ಯಕ್ಕೆ ವರವಾಗಿ ಬಂದವರು. ವೇದ, ಉಪನಿಷತ್‌ ಹಾಗೂ ಮಂತ್ರಗಳಿಗೆ ಬಹುದೊಡ್ಡ ಸ್ಥಾನವಿದೆ. ಆ ಸ್ಥಾನವನ್ನು ಕನ್ನಡದ ಕವಿತ್ವಕ್ಕೆ ತಂದುಕೊಟ್ಟವರು ಬೇಂದ್ರೆ. ಅವರ ಸಾಹಿತ್ಯವನ್ನು ವಿಮರ್ಶಿಸುವ ಕಾಲ ಮುಗಿದಿದೆ. ಅವುಗಳನ್ನು ವ್ಯಾಖ್ಯಾನಿಸಬೇಕಿರುವುದು ಈಗಿನ ತುರ್ತು ಅಗತ್ಯ’ ಎಂದರು.

‘ಬೇಂದ್ರೆ ಅವರು ಕವಿತ್ವವನ್ನು ವಿಕಾಸವನ್ನಾಗಿ ಮಾಡಿಕೊಂಡವರು. ಈ‍ಪುಸ್ತಕದಲ್ಲಿರುವ 52 ಪದ್ಯಗಳಿಗೂ ಸಾರಾಂಶ ನೀಡಲಾಗಿದೆ. ಪದ್ಯಗಳ ಜೊತೆಗೆ ಟಿಪ್ಪಣಿಗಳನ್ನೂ ಕೊಡಲಾಗಿದೆ. ಇವುಬೇಂದ್ರೆಯವರ ಸಾಹಿತ್ಯಕ್ಕೆ ಹೊಂದುವಂತೆ, ಅವರ ಜೀವನ ತತ್ವಕ್ಕೆ ಅನುಗುಣವಾಗಿಯೇ ಇವೆ’ ಎಂದು ತಿಳಿಸಿದರು.

‘ಬೇಂದ್ರೆಯವರ ಹಲವು ಕವನ ಸಂಕಲ‌ನ, ನಾಟಕ, ತುಂಬಾ ಕಠಿಣ ಎನಿಸಿದ ಕಾವ್ಯಗಳನ್ನು ಅರ್ಥ ಮಾಡಿಕೊಳ್ಳಲು ಈ ಟಿಪ್ಪಣಿಗಳು ಸಹಾಯವಾಗುತ್ತವೆ.ಬೇಂದ್ರೆಯವರ ಕೃತಿಗಳನ್ನು ಹೊಸ ತಲೆಮಾರಿನವರು ಓದುವುದಕ್ಕೆ ಇಂತಹ ಪುಸ್ತಕಗಳು ನೆರವಾಗಲಿವೆ. ಈ ಕೃತಿಯ ಮೂಲಕ ಭಾರತೀಯ ವ್ಯಾಖ್ಯಾನ ಪದ್ಧತಿಯನ್ನು ಇಬ್ಬರು ಲೇಖಕರು ಎತ್ತಿ ಹಿಡಿದಿದ್ದಾರೆ’ ಎಂದು ಹೇಳಿದರು.

ವಿದ್ವಾಂಸಮಲ್ಲೇಪುರಂ ಜಿ.ವೆಂಕಟೇಶ, ‘ನಾವೆಲ್ಲ ಬೇಂದ್ರೆ ಹಾಗೂ ಅವರ ಕಾವ್ಯದ ಜೊತೆ ಸಹಪ್ರಯಾಣ ಮಾಡಬೇಕು. ಬೇಂದ್ರೆಯವರು ನಮ್ಮ ಜೊತೆ ಸದಾ ಇರುತ್ತಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಕನ್ನಡ ಕಾವ್ಯ ಜಗತ್ತನ್ನು ವಿಸ್ತರಿಸಿಕೊಂಡು ಹೋಗಬೇಕು. ಆತ್ಮ ಹಾಗೂ ಕಾವ್ಯದ ಸಾಕ್ಷಾತ್ಕಾರ ಆಗಬೇಕಾದರೆ ವಿಮರ್ಶೆಯ ಬದಲು ವ್ಯಾಖ್ಯಾನದತ್ತ ಹೊರಳುವುದು ಅಗತ್ಯ’ ಎಂದರು.

ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ಪಡೆದ ಸಂಶೋಧಕಿಯರಾದ ಶೈಲಜಾ ಹೆಗ್ಡೆ, ಕೆ.ವಿ.ಅನಿತ ಹಾಗೂ ಆಶಾ ಚೌಗಲೆ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಕೃತಿಯ ಲೇಖಕರಾದಜಿ.ಕೃಷ್ಣಪ್ಪ, ಟಿ.ಎನ್. ವಾಸುದೇವಮೂರ್ತಿ,ದ.ರಾ.ಬೇಂದ್ರೆ ಕಾವ್ಯ ಕೂಟದ ಉಪಾಧ್ಯಕ್ಷ ಶ್ರ.ದೇ.ಪಾಶ್ವನಾಥ್‌, ಎ.ಕೆ.ರವಿಶಂಕರ್‌, ಎಚ್‌.ಎಂ.ಮೋಹನ ಕುಮಾರ್‌, ಸಮಿಉಲ್ಲ ಖಾನ್‌, ಡಿ.ಪಿ.ಸುಪ್ರಿತಾ ಹಾಗೂ ಟಿ.ಎನ್‌.ನಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT