ಬೆಂಗಳೂರು: ಯಾವುದೇ ವಿಚಾರಗಳ ಕುರಿತು ಹೋರಾಟಗಾರ್ತಿಯ ರೀತಿಯಲ್ಲಿ ತಾವು ಈಗ ಮಾತನಾಡಲು ಆಗುವುದಿಲ್ಲ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಶುಕ್ರವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 'ಈಗ ನಾನು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೇನೆ. ಈ ಕಾರಣದಿಂದ ಹೋರಾಟಗಾರ್ತಿಯಂತೆ ಮಾತನಾಡಲು ಆಗದು' ಎಂದರು.
ಘಟನೆ ನಡೆದಿರುವ ಮಾಹಿತಿ ತಿಳಿದ ತಕ್ಷಣ ಮೈಸೂರು ನಗರ ಪೊಲೀಸ್ ಕಮಿಷನರ್ ಮತ್ತು ಅಲ್ಲಿನ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಚರ್ಚೆ ನಡೆಸಲಾಗಿದೆ. ಕೃತ್ಯ ಎಸಗಿದವರ ಬಂಧನ ಮತ್ತು ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಗೃಹ ಸಚಿವರ ಹೇಳಿಕೆ ಕುರಿತು ಅವರೇ ಉತ್ತರಿಸಬೇಕು. ಅವರ ಹೇಳಿಕೆ ಬಗ್ಗೆ ತಾವು ಉತ್ತರ ನೀಡಲು ಸಾಧ್ಯವಿಲ್ಲ ಎಂದರು.