ಕೋಲಾರ: 'ನಾನು ಈಗ ನಾಮಪತ್ರ ಹಾಕಲು ಬಂದಿಲ್ಲ. ಹಾಗೇನಾದರೂ ನಾಮಪತ್ರ ಸಲ್ಲಿಸಲು ಬಂದರೆ ಜೋರು ಚಪ್ಪಾಳೆ ಹೊಡೆಯಿರಿ. ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ' ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಈ ಮೂಲಕ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಗ್ಗೆ ಸುಳಿವು ನೀಡಿದರು.
ಇಲ್ಲಿನ ಮೆಥಾಡಲಿಜಿಸ್ಟ್ ಚರ್ಚಿನಲ್ಲಿ ಭಾನುವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
'ಬಾದಾಮಿ, ವರುಣಾ ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಒತ್ತಡವಿದೆ. ನಾನಿನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕೋಲಾರದಲ್ಲಿ ಸ್ಪರ್ಧಿಸುವಂತೆ ಎಲ್ಲರೂ ಒತ್ತಡ ಹೇರುತ್ತಿದ್ದಾರೆ' ಎಂದರು.
'ಎಲ್ಲಾ ಧರ್ಮದವರೂ ನಮ್ಮ ದೇಶದಲ್ಲಿ ಇದ್ದಾರೆ. ಬಹುತ್ವದ ದೇಶ ನಮ್ಮದು. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸಬೇಕು' ಎಂದು ಹೇಳಿದರು.
'ಜಾತ್ಯತೀತ, ಬಹುತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ ಕಾಂಗ್ರೆಸ್. ಒಂದೇ ತಾಯಿ ಮಕ್ಕಳಂತೆ ಬದುಕಬೇಕು. ಕ್ರೈಸ್ತ ಸಮುದಾಯದವರೂ ಗೌರವದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಎಲ್ಲಾ ಧರ್ಮಗಳ ಸಂಪ್ರದಾಯ ಆಚರಣೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು' ಎಂದರು.
ಸಿದ್ದರಾಮಯ್ಯ ಅವರ ರಾಜಕೀಯ ಶ್ರೇಯಕ್ಕಾಗಿ ಚರ್ಚ್ ನಲ್ಲಿ ಪಾದ್ರಿಗಳು ಪ್ರಾರ್ಥಿಸಿದರು. ಅವರ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಶುಭ ಕೋರಿದರು.