ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಒಕ್ಕಲಿಗರ ನಾಯಕರಲ್ಲ, ಕನಕಪುರ ನಾಯಕ: ಆರ್‌.ಅಶೋಕ

Published 15 ಏಪ್ರಿಲ್ 2024, 15:46 IST
Last Updated 15 ಏಪ್ರಿಲ್ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒಕ್ಕಲಿಗ ನಾಯಕರೇ ಅಲ್ಲ. ಅವರು ಯಾವಾಗ ಒಕ್ಕಲಿಗ ನಾಯಕರಾಗಿದ್ದರು. ಒಕ್ಕಲಿಗ ಸಮುದಾಯಕ್ಕೆ ಅವರ ಕೊಡುಗೆ ಏನು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಕನಕಪುರ ಹೊರತುಪಡಿಸಿದರೆ ಬೇರೆಲ್ಲೂ ಅವರು ನಾಯಕರಲ್ಲ. ಕಾಂಗ್ರೆಸ್‌ನಲ್ಲಿ ಒಕ್ಕಲಿಗ ನಾಯಕರೇ ಇಲ್ಲ, ಜೆಡಿಎಸ್‌ ಮತ್ತು ಬಿಜೆಪಿಯಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ನಾಯಕರಿದ್ದಾರೆ’ ಎಂದರು.

‘ನಾನು ಈಗ ವಿರೋಧಪಕ್ಷದ ನಾಯಕ. 10 ವರ್ಷಗಳ ಹಿಂದೆಯೇ ಡಿಸಿಎಂ ಆಗಿದ್ದೆ. ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಐದು ವರ್ಷದ ಮೊದಲೇ ಡಿಸಿಎಂ ಆಗಿದ್ದರು. ಎಚ್‌.ಡಿ.ದೇವೇಗೌಡರು ಪ್ರಧಾನಿಗಳಾಗಿದ್ದರು. ಕುಮಾರ‌ಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ನಾವು ಸೀನಿಯರ್ಸ್‌, ನೀವು ಜೂನಿಯರ್‌’ ಎಂದರು.

‘ಕಾಂಗ್ರೆಸ್‌ನವರು ಜಾತಿಗಣತಿ ನಡೆಸಲು ಅವಕಾಶ ನೀಡಿ, ಅದರಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆಯನ್ನು ಆರನೇ ಸ್ಥಾನಕ್ಕೆ ಇಳಿಸಲಾಗಿದೆ. ಆ ಮಾಹಿತಿ ಸೋರಿಕೆ ಮಾಡಿದ್ದು ಯಾರು ಎಂಬುದು ಗೊತ್ತಿದೆ. ಜಾತಿಗಣತಿ ವಿಚಾರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಶಿವಕುಮಾರ್‌ ಏನು ಮಾಡಿದ್ದಾರೆ? ಸಚಿವ ಸಂಪುಟದಲ್ಲಿ ಪ್ರಸ್ತಾಪ ಆದಾಗ ಒಕ್ಕಲಿಗ ಸಮುದಾಯದ ಬಗ್ಗೆ ಗೌರವ ಇದ್ದಿದ್ದರೆ ಶಿವಕುಮಾರ್‌ ರಾಜೀನಾಮೆ ನೀಡಬೇಕಿತ್ತು. ಸಂಪುಟದಲ್ಲಿ ಬಾಯಿ ಬಿಡದ ಇವರು ಒಕ್ಕಲಿಗ ನಾಯಕ ಹೇಗಾಗುತ್ತಾರೆ?’ ಎಂದರು.

‘ಕುಕ್ಕರ್ ಸ್ಫೋಟದ ಆರೋಪಿಯನ್ನು ತಮ್ಮ ಬ್ರದರ್‌ ಎಂದಿದ್ದಾರೆ. ಅಂತಹವರು ಒಕ್ಕಲಿಗ ಸಮುದಾಯದವರನ್ನು ಹೇಗೆ ತಮ್ಮ ಸಹೋದರರು ಎನ್ನಲು ಸಾಧ್ಯ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT