ಬೆಂಗಳೂರು: ‘ಬೆಂಗಳೂರಿಗೆ ಮತ್ತೆ ವಿಶ್ವಮಟ್ಟದ ಮನ್ನಣೆ ಸಿಗಬೇಕು. ‘ಬ್ರ್ಯಾಂಡ್ ಬೆಂಗಳೂರು’ ‘ಬೆಟರ್ ಬೆಂಗಳೂರು’ ಆಗಬೇಕು. ಅದಕ್ಕಾಗಿ ‘ಗ್ಲೋಬಲ್ ಬೆಂಗಳೂರು’ ನಿರ್ಮಾಣ ಮಾಡಬೇಕಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಂಗಳೂರಿನ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆಗೆ ಸುಮಾರು ಮೂರು ತಾಸು ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ನಾರಾಯಣ ಮೂರ್ತಿ ನೇತೃತ್ವದಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗಾಗಿ ಸಲಹಾ ಸಮಿತಿ ಮಾಡಲಾಗಿತ್ತು. ಅದೇ ರೀತಿ ಬೆಂಗಳೂರಿನ ಬಗ್ಗೆ ಕಾಳಜಿ ಉಳ್ಳವರ ಜತೆ ಸಭೆ ನಡೆಸಲು ತೀರ್ಮಾನಿಸಿದ್ದೇನೆ. ಬೆಂಗಳೂರು ಅಭಿವೃದ್ಧಿ ಕುರಿತು ಸಲಹಾ ಸಮಿತಿಯೊಂದನ್ನು ರೂಪಿಸಲಾಗುವುದು’ ಎಂದು ಅವರು ಹೇಳಿದರು.
‘ಬೆಂಗಳೂರು ಅಂತರರಾಷ್ಟ್ರೀಯ ನಗರ. ಅದರ ಘನತೆ ಮತ್ತು ವೈಭವವನ್ನು ನಾವು ಪುನರ್ಸ್ಥಾಪಿಸಬೇಕು. ಬಿಜೆಪಿ ನಾಯಕರೇ ಈ ಹಿಂದಿನ ಸರ್ಕಾರದ ಕಾರ್ಯ ವೈಖರಿ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ. ಸರ್ಕಾರಿ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ ಎಂದು ಅನೇಕ ನಾಯಕರು ಅಭಿಪ್ರಾಯಪಟ್ಟಿದ್ದು, ಈ ವಿಚಾರವಾಗಿ ಸಭೆಯಲ್ಲಿ ಸಲಹೆಗಳನ್ನು ನೀಡಿದ್ದಾರೆ’ ಎಂದರು.
‘ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣದ ವಿಚಾರವಾಗಿ ಮಾಸ್ಟರ್ ಪ್ಲಾನ್ ಕೇಳಿದ್ದೇನೆ. ರಾಜಕಾಲುವೆ ಒತ್ತುವರಿ, ಹೂಳು ತೆಗೆಯುವ ಕೆಲಸದ ಕುರಿತು ಮಾಹಿತಿ ಮತ್ತು ದಾಖಲೆ ಕೇಳಿದ್ದೇನೆ. ಪ್ರವಾಹ ಪರಿಸ್ಥಿತಿ ಎದುರಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಯ ಯೋಜನೆ ಸಿದ್ಧಪಡಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆಯುವ ಪ್ರತಿ ಕಾಮಗಾರಿಯ ವಿಚಾರದಲ್ಲಿ ಅಧಿಕಾರಿಗಳು ಪಾರದರ್ಶಕ ಮತ್ತು ಹೊಣೆಗಾರಿಕೆಯಿಂದ ಇರಬೇಕು. ಪ್ರತಿ ವಾರ್ಡ್ ಮಟ್ಟದಲ್ಲಿ ಎಷ್ಟು ರಸ್ತೆ ಇದೆ. ಯಾವ ಇಲಾಖೆಯಿಂದ ಯಾವ ಕೆಲಸ ಆಗುತ್ತಿದೆ ಎಂಬ ಬಗ್ಗೆ ವಾರ್ಡ್ ಮಟ್ಟದ ವರದಿ ನೀಡಬೇಕು. ಯಾವುದೇ ಕೆಲಸ ಆರಂಭವಾಗುವ ಮುನ್ನ, ಆರಂಭವಾದ ನಂತರ ಹಾಗೂ ಕೆಲಸ ಮುಗಿದ ನಂತರ ಫೋಟೊ ಹಾಗೂ ವಿಡಿಯೊ ದಾಖಲಾತಿ ಇರಬೇಕು. ಪಾರದರ್ಶಕತೆ ಹಾಗೂ ಹೊಣೆಗಾರಿಕೆ ತರಲು ಈ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಕೆಲಸ ಮಾಡದೇ ಬಿಲ್ ಬರೆಯುವ ಪದ್ಧತಿಗೆ ತಿಲಾಂಜಲಿ ಹಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
‘ಕಸ ವಿಲೇವಾರಿ ಕುರಿತು ಸಭೆಯಲ್ಲಿದ್ದ ಅನೇಕರು ಸಲಹೆ ನೀಡಿದ್ದಾರೆ. ಹೀಗಾಗಿ ಕಸ ತೆಗೆದುಕೊಂಡು ಹೋಗುವ ವಾಹನಗಳ ಮಾಹಿತಿ ಇರಬೇಕು. ಇದಕ್ಕಾಗಿ ವ್ಯವಸ್ಥೆ ರೂಪಿಸಲು ಪಾಲಿಕೆ, ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಕಸ ವಿಲೇವಾರಿ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ನೀಡಿರುವ ಸಲಹೆಗಳ ಬಗ್ಗೆ ಗಮನಹರಿಸುತ್ತೇನೆ’ ಎಂದರು.
‘ಬಿಡಿಎ ಕಾಂಪ್ಲೆಕ್ಸ್ಗಳಲ್ಲಿ ಅನೇಕ ಮಳಿಗೆಗಳು ಖಾಲಿ ಇವೆ. ಇವುಗಳನ್ನು ರೀಮಾಡೆಲಿಂಗ್ ಮಾಡಲು ಒತ್ತು ನೀಡುತ್ತೇನೆ. ಕೆಲವು ವಾರ್ಡ್ಗಳಿಗೆ ವಾರ, 15 ದಿನಗಳಾದರೂ ನೀರು ಪೂರೈಸುತ್ತಿಲ್ಲ. ನೀರಿನ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಪುಲಕೇಶಿನಗರದ ಶಾಸಕರು ಸೇರಿದಂತೆ ಹಲವರು ತಿಳಿಸಿದ್ದಾರೆ. ಈ ವಿಚಾರವಾಗಿ ಪ್ರತಿ ಕ್ಷೇತ್ರವಾರು ಜನಸಂಖ್ಯೆ, ನಿಗದಿಯಾದ ನೀರಿನ ಪ್ರಮಾಣದ ಕುರಿತು ಪರಿಶೀಲನೆ ನಡೆಸುತ್ತೇನೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.