ಬೆಂಗಳೂರು: ಶಾಸಕ ರೋಷನ್ ಬೇಗ್ ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಗ್ ಪುತ್ರ ರುಮಾನ್ ಬೇಗ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಧ್ಯೆ ಟ್ವೀಟ್ ಸಮರ ನಡೆದಿದೆ.
‘ನೀವು ಪಕ್ಷವನ್ನು ಮುನ್ನಡೆಸುತ್ತಿರುವ ಕಾರಣ ಬಹಳಷ್ಟು ನಾಯಕರು ಪಕ್ಷವನ್ನು ತೊರೆಯುತ್ತಿದ್ದಾರೆ. ಇದಕ್ಕೆ ಬಿಜೆಪಿ ಕಾರಣವಲ್ಲ. ನಿಮ್ಮ ನಾಯಕತ್ವ ಗೌರವಪೂರ್ಣವಾದುದಲ್ಲ. ಚುನಾವಣೆಯಲ್ಲಿ ಪಕ್ಷ ಒಂದೇ ಸ್ಥಾನ ಗೆದ್ದಿತು. ಅಲ್ಲೂ ನಿಮ್ಮ ಪ್ರಭಾವವಿರಲಿಲ್ಲ’ ಎಂದು ರುಮಾನ್ ಬೇಗ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ದಿನೇಶ್, ‘ಬಿಜೆಪಿ ಈಗ ರೋಷನ್ ಬೇಗ್ ಅವರ ಬೆಂಗಾವಲಿಗೆ ನಿಂತಿದೆ. ಕೆಲವು ವಾರಗಳ ಹಿಂದೆ ಐಎಂಎ ಹಗರಣದಲ್ಲಿ ರೋಷನ್ ಬೇಗ್ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು. ಇವೆಲ್ಲ ನೋಡಿದರೆ ಮೈತ್ರಿ ಸರ್ಕಾರ ಬೀಳಿಸಲು ಅವರ ಕೈವಾಡ ಇರುವುದು ಸ್ಪಷ್ಟ’ ಎಂದಿದ್ದಾರೆ.
ಬಿಜೆಪಿ ಟೀಕೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶೇಷ ತನಿಖಾ ದಳವನ್ನು (ಎಸ್ಐಟಿ) ರಾಜಕೀಯ ಹಗೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.