ಬೆಂಗಳೂರು: 'ಪಕ್ಷ ಸಂಘಟನೆ ಮತ್ತು ನಿಗಮ ಮಂಡಳಿಗಳಿಗೆ ಶಾಸಕರು ಮತ್ತು ಕಾರ್ಯಕರ್ತರ ನೇಮಕ ಕುರಿತು ನಮ್ಮ ನಾಯಕರ ಜೊತೆ ಚರ್ಚೆ ಮಾಡಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ನಿಗಮ- ಮಂಡಳಿ ನೇಮಕ ಮತ್ತಿತರ ವಿಚಾರಗಳ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಸಮಾಲೋಚನೆ ನಡೆಸಿದ ನಂತರ ತಾಜ್ ವೆಸ್ಟೆಂಡ್ ಬಳಿ ಮಂಗಳವಾರ ಮಧ್ಯರಾತ್ರಿ ಅವರು ಮಾತನಾಡಿದರು.
'ಶಾಸಕರಿಗೆ ಜವಾಬ್ದಾರಿ ನೀಡುವ ಬಗ್ಗೆ ಮೊದಲ ಸುತ್ತಿನ ಚರ್ಚೆ ಆಗಿದ್ದು, ಈಗಿನ ಪಟ್ಟಿಯನ್ನು ಕೇಂದ್ರ ನಾಯಕರು ಪರಿಶೀಲಿಸಲಿದ್ದಾರೆ. ನಂತರ ಎರಡನೇ ಸುತ್ತಿನ ಚರ್ಚೆ ಆಗಲಿದೆ" ಎಂದರು
ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲು ಎಷ್ಟು ಸಮಯಾವಕಾಶ ಬೇಕು ಎಂಬ ಪ್ರಶ್ನೆಗೆ, 'ಪಂಚರಾಜ್ಯ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಮತ್ತು ನಾನು ಪ್ರಚಾರಕ್ಕೆ ಹೋಗಬೇಕಿದೆ. ಆದಷ್ಟು ಬೇಗ ಈ ಪ್ರಕ್ರಿಯೆ ಮಾಡುತ್ತೇವೆ" ಎಂದರು.
ಗೃಹ ಸಚಿವ ಜಿ. ಪರಮೇಶ್ವರ ಮುನಿಸಿಕೊಂಡಿದ್ದಾರೆ ಎಂಬ ಬಗ್ಗೆ ಚರ್ಚೆ ಆಗುತ್ತಿದೆಯಲ್ಲ ಎಂದು ಕೇಳಿದಾಗ, "ಗೃಹಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿಯಿಂದ ಬಂದು ಚರ್ಚೆ ಮಾಡಿದ್ದಾರೆ. ಯಾರು ಯಾಕೆ ಮುನಿಸಿಕೊಳ್ಳುತ್ತಾರೆ" ಎಂದು ಕೇಳಿದರು.
ಲೋಕಸಭೆ ಚುನಾವಣೆ ಸಂಬಂಧದ ವರದಿ ಬಗ್ಗೆ ಕೇಳಿದಾಗ, "ಕೆಲವರು ತಮ್ಮ ವರದಿ ನೀಡಿದ್ದು, ಮತ್ತೆ ಕೆಲವರು ಇನ್ನಷ್ಟೇ ನೀಡಬೇಕಿದೆ" ಎಂದು ತಿಳಿಸಿದರು.