ಶೃಂಗೇರಿ: ‘ರಾಜ್ಯ ಸರ್ಕಾರದ ವತಿಯಿಂದ ಮಳೆಗಾಗಿ ಪ್ರಾರ್ಥಿಸಲು ಪುಣ್ಯಕ್ಷೇತ್ರ, ದೇಗುಲಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದೇವೆ. ಮಳೆ ದೇವರು ಎಂಬ ಇತಿಹಾಸವಿರುವ ತಾಲ್ಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲದಲ್ಲಿ ಗುರುವಾರ ನಸುಕಿನಲ್ಲಿ ಕೈಂಕರ್ಯ ನೆರವೇರಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಗುರುವಾರ ಬೆಳಗಿನ ಜಾವ 5.30ರಿಂದ ಹೋಮ, ಹವನ, ಪೂಜಾ ವಿಧಿಗಳು ಶುರುವಾಗಲಿವೆ. ಶುಭ ಗಳಿಗೆ, ಮೂಹೂರ್ತದಲ್ಲಿ ಕೈಂಕರ್ಯಗಳು ನೆರವೇರಲಿವೆ. ನಾನು, ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಪಾಲ್ಗೊಳ್ಳುತ್ತೇವೆ’ ಎಂದು ಮಾಹಿತಿ ನೀಡಿದರು.
‘ರಾಜ್ಯದಲ್ಲಿ ಬರಗಾಲ ದೂರಾಗಿ ಉತ್ತಮ ಮಳೆಯಾಗಬೇಕು. ಜಲಾಶಯಗಳು, ಕೆರೆಕಟ್ಟೆಗಳು ಭರ್ತಿಯಾಗಬೇಕು. ಕುಡಿಯಲು, ಬೆಳೆಗಳಿಗೆ ನೀರಾಗಬೇಕೆಂದು ಪ್ರಾರ್ಥಿಸುತ್ತೇವೆ. ಈ ಹಿಂದೆ ಇಂಧನ ಸಚಿವನಾಗಿದ್ದಾಗ ಕಿಗ್ಗಾ ದೇಗುಲಕ್ಕೆ ಮೂರು ಬಾರಿ ಭೇಟಿ ನೀಡಿದ್ದೇನೆ. ಮಳೆ ದೇಗುಲ ಎಂದು ಪ್ರಸಿದ್ಧಿಯಾಗಿದೆ’ ಎಂದರು.
‘ರಾಜಕೀಯ ಮಾತನಾಡದಂತೆ ಕಟ್ಟಪ್ಪಣೆ’: ಯಾರೂ ರಾಜಕೀಯ ಮಾತನಾಡಬಾರದು ಎಂದು ಕಟ್ಟಪ್ಪಣೆಯಾಗಿದೆ. ನನಗೂ ಸಮೇತ. ಹೀಗಾಗಿ ಮಾತನಾಡುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.