ಬೆಳಗಾವಿ: ಕಬ್ಬಿನ ಬಿಲ್ ಬಾಕಿ ಕೊಡಿಸುವಂತೆ ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಕೊರೆಯುವ ಚಳಿಯಲ್ಲೂ ಅರೆಬೆತ್ತಲೆಯಾಗಿ ಧರಣಿ ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಗೇಟಿನ ದ್ವಾರದಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿರುವ ಅವರು, ಸ್ಥಳದಲ್ಲೇ ಉಪಾಹಾರ ಸೇವಿಸಿದರು.
ಕೆಲವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಸ್ನಾನ ಮಾಡಿದರು. ಕಬ್ಬು ಸಾಗಿಸುತ್ತಿದ್ದ ಲಾರಿ ಹಾಗೂ ಟ್ರ್ಯಾಕ್ಟರ್ ತಡೆದರು.
ಪ್ರತಿಭಟನಾನಿರತ ಜಯಶ್ರೀ ಗುರಣ್ಣವರ ತಲೆ ಮೇಲೆ ಇಟ್ಟಿಗೆ ಗಾತ್ರದ ಕಲ್ಲು ಹೊತ್ತುಕೊಂಡು ಕುಳಿತಿರುವುದು ವಿಶೇಷ. ಮಂಜು ಗದಾಡಿ ಎನ್ನುವವರು ತಲೆಕೆಳಗೆ ಮಾಡಿ ನಿಂತು ಕೆಲಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತರೊಬ್ಬರು ಉರುಳುಸೇವೆ ಮಾಡಿದರು. ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಚಿತ್ರ ಹಿಡಿದಿರುವ ಅವರು ಹಾಗೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಾಕಿ ಕೊಡುವವರೆಗೂ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಬಂದ್ ಮಾಡಿಸಬೇಕು. ಸ್ಥಳಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮುಖಂಡರಾದ ಸಿದಗೌಡ ಮೋದಗಿ, ಲಿಂಗರಾಜ ಪಾಟೀಲ, ಅಶೋಕ ಯಮಕನಮರಡಿ, ಸೋಮು ರೈನಾಪುರ ಭಾಗವಹಿಸಿದ್ದಾರೆ.