ಬೆಂಗಳೂರು: ಶಾಸಕರ ಅಸಮಾಧಾನ ಹೊರಬಿದ್ದ ಬೆನ್ನಲ್ಲೇ ಗ್ರೇಡ್–1 ಮತ್ತು ಗ್ರೇಡ್–2 ದರ್ಜೆಯ 146 ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
ತಹಶೀಲ್ದಾರ್ಗಳ ವರ್ಗಾವಣೆಗೆ ಸಂಬಂಧಿಸಿದಂತೆ ಒಂದೇ ದಿನ ಮೂರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಅನುಕ್ರಮವಾಗಿ 84, 46 ಮತ್ತು 16 ತಹಶೀಲ್ದಾರ್ಗಳ ವರ್ಗಾವಣೆಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿದೆ.
ಈ ಪೈಕಿ 12 ಮಂದಿ ತಹಶೀಲ್ದಾರ್ಗಳನ್ನು ಈಗ ಇರುವ ಸ್ಥಳದಲ್ಲೇ ಮುಂದುವರಿಸಲಾಗಿದೆ. ಅದನ್ನು ವರ್ಗಾವಣೆ ಆದೇಶದಲ್ಲೇ ಪ್ರಕಟಿಸ ಲಾಗಿದೆ. ಈ ಹಿಂದೆ ವರ್ಗಾವಣೆಯಾಗಿದ್ದು, ಸ್ಥಳ ನಿರೀಕ್ಷಣೆಯಲ್ಲಿದ್ದ ಕೆಲವರಿಗೆ ಶುಕ್ರವಾರದ ಪಟ್ಟಿಗಳಲ್ಲಿ ಹುದ್ದೆ ತೋರಿಸಲಾಗಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ಮಂದಿ ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಲಾಗಿತ್ತು. ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ಶಾಸಕರು, ಸಚಿವರು ಮತ್ತು ಪಕ್ಷದ ಮುಖಂಡರ ಶಿಫಾರಸು ಆಧರಿಸಿ ತಹಶೀಲ್ದಾರ್ಗಳ ವರ್ಗಾವಣೆ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿತ್ತು. ಆದರೆ, ಅದನ್ನು ಪ್ರಕಟಿಸದೇ ಕೆಲವು ದಿನಗಳಿಂದ ತಡೆ ಹಿಡಿಯಲಾಗಿತ್ತು. ಶಾಸಕರು ಪತ್ರದ ಮೂಲಕ ಅಸಮಾಧಾನ ಹೊರಹಾಕಿದ ಬಳಿಕ 170 ತಹಶೀಲ್ದಾರ್ಗಳ ವರ್ಗಾವಣೆಗೆ ಆದೇಶ ಹೊರಡಿಸಲು ಸಿದ್ಧತೆ ನಡೆದಿತ್ತು. ಆದರೆ, ಅಂತಿಮವಾಗಿ 146 ಮಂದಿಯ ವರ್ಗಾವಣೆ ಆದೇಶಗಳು ಹೊರಬಿದ್ದಿವೆ ಎಂದು ಮೂಲಗಳು ತಿಳಿಸಿವೆ.