ಬೆಂಗಳೂರು: ‘ನಮ್ಮ ತಾಯಿಯವರಿಗೆ ಆದಾಯ ತೆರಿಗೆ ಇಲಾಖೆಯವರು ನೋಟಿಸ್ ನೀಡಿರುವುದಕ್ಕೆ ತಲೆ ಕೆಡಿಸಿಕೊಳ್ಳುವ, ಆತಂಕಪಡುವ ಅಗತ್ಯವಿಲ್ಲ. ಉತ್ತರ ಕೊಟ್ಟರೆ ಮುಗಿಯಿತು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಈ ಕುರಿತು ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ನೋಟಿಸ್ ಬಂದಿರುವ ಕುರಿತು ನನಗೆ ಮಾಹಿತಿ ಇಲ್ಲ. ಎಚ್.ಡಿ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಯಾವತ್ತೂ ಹಣಕ್ಕೆ ಮಹತ್ವ ನೀಡಿಲ್ಲ. ನಾವು ಕೂಡ ಯಾವತ್ತೂ ಹಣಕ್ಕೆ ಪ್ರಾಮುಖ್ಯತೆ ನೀಡಿಲ್ಲ’ ಎಂದರು.
‘ಅವರು ನೋಟಿಸ್ ಕೊಟ್ಟಿದ್ದಾರೆ. ಅದಕ್ಕೆ ಸರಿಯಾದ ಉತ್ತರ ಕೊಟ್ಟರೆ ಮುಗಿಯಿತು. ಸಹೋದರ ಎಚ್.ಡಿ. ರೇವಣ್ಣ ಅವರಿಗೂ ಇದೇ ಮಾತನ್ನು ಹೇಳಿದ್ದೇನೆ. ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಅಗತ್ಯವಿಲ್ಲ’ ಎಂದು ಹೇಳಿದರು.