ಬೆಂಗಳೂರು: ರಾಜ್ಯದ ಪ್ರಮುಖ ರಸ್ತೆ ಜಾಲದ ಭಾಗವಾಗಿರುವ ಸುಮಾರು 875 ಕಿ.ಮೀ ರಾಜ್ಯ ಹೆದ್ದಾರಿಯನ್ನು ₹5,736 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆ ಬಳಿಕ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಒಟ್ಟು ಯೋಜನಾ ವೆಚ್ಚದಲ್ಲಿ ₹3,115 ಕೋಟಿ ಬಾಹ್ಯ ಹಣಕಾಸಿನ ನೆರವಿನ ಮೂಲಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಕೆಶಿಪ್–4 ರ ಅಡಿ ಅಭಿವೃದ್ಧಿಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಮಂತ್ರಾಲಯಕ್ಕೆ ಸಲ್ಲಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿಯ ಸೇತುಬಂಧನ್ ಯೋಜನೆಯಡಿ ರಾಜ್ಯದ ಆರು ಸ್ಥಳಗಳಲ್ಲಿ ರೈಲ್ವೆ ಮೇಲು ಸೇತುವೆ, ಕೆಳ ಸೇತುವೆಗಳನ್ನು ಒಟ್ಟು ₹276.93 ಕೋಟಿ ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಹಾರಂಗಿ ಜಲಾಶಯ ಯೋಜನೆಯ ಹಾರಂಗಿ ಎಡದಂಡೆ ನಾಲೆಯ ಸರಪಳಿ 6.875 ಕಿ.ಮೀ.ನಿಂದ ಸರಪಳಿ 14.75 ಕಿ.ಮೀವರೆಗೆ ರೀಮಾಡಲಿಂಗ್ ಕಾಮಗಾರಿಯ ₹72.25 ಕೋಟಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.
ರಾಮನಗರ ಜಿಲ್ಲೆ ಮಾಯಗಾನಹಳ್ಳಿಯಿಂದ ಸುಗ್ಗನಹಳ್ಳಿ ಮಾರ್ಗವಾಗಿ ಬೆಜ್ಜಗರಹಳ್ಳಿ ಕಟ್ಟೆ ಸಂಪರ್ಕಿಸುವ ಜಿಲ್ಲಾ ಮುಖ್ಯರಸ್ತೆಯ ಸರಪಳಿ 4.90 ಕಿ.ಮೀ.ನಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಕಾಮಗಾರಿಗೆ ₹10 ಕೋಟಿ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಕೆರೆ ತೊಣ್ಣೂರು ಕೋಡಿಹಳ್ಳವನ್ನು ಲಕ್ಷ್ಮೀಸಾಗರ ಗ್ರಾಮದಿಂದ ಹಿರೋಡೆಕೆರೆವರೆಗಿನ ಅಭಿವೃದ್ಧಿ ಕಾಮಗಾರಿಗೆ ₹34.25 ಕೋಟಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಕೆಳಭಾಗದಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲುವ ಕಾಮಗಾರಿ ₹13.60 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.