ಇಲ್ಲಿನ ರಾಮಕೃಷ್ಣನಗರದಲ್ಲಿ ನೆಲೆಸಿರುವ ದಂಪತಿಗೆ ಮದುವೆಯಾಗಿ 15 ವರ್ಷಗಳಾಗಿದ್ದರೂ ಸಂಸಾರದಲ್ಲಿ ಸಾಮರಸ್ಯ ಇರಲಿಲ್ಲ. ಮಕ್ಕಳೂ ಆಗಿರಲಿಲ್ಲ. ಜೆರಾಕ್ಸ್ ಅಂಗಡಿಯೊಂದನ್ನು ನಡೆಸುತ್ತಿದ್ದ ಪತಿ ಪಾಂಡವಪುರದ ವಿದ್ಯಾಹಂಸಭಾರತಿ ಸ್ವಾಮೀಜಿ ಅವರಿಗೆ ನಿಕಟವರ್ತಿಯಾಗಿದ್ದರು. ಪತಿಯು ಸೆ. 4ರಂದು ಚಾತುರ್ಮಸ್ಯ ಪೂಜೆಗೆಂದು ಮಧ್ಯರಾತ್ರಿ ಸ್ವಾಮೀಜಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಸ್ವಾಮೀಜಿಗೆ ಪೂಜೆಯಲ್ಲಿ ಸಹಕರಿಸಿದರೆ ಸಾಲವೆಲ್ಲ ತೀರುತ್ತದೆ ಎಂದು ಮಹಿಳೆಗೆ ಪತಿ ಪುಸಲಾಯಿಸಲು ಯತ್ನಿಸಿದ್ದಾರೆ. ಈ ಮಧ್ಯೆ ಪೂಜೆ ನೆವದಲ್ಲಿ ಸ್ವಾಮೀಜಿ ಮೈಮುಟ್ಟುವುದು ಸೇರಿದಂತೆ ಲೈಂಗಿಕವಾಗಿ ಕಿರಕುಳ ನೀಡಲಾರಂಭಿಸಿದ್ದಾರೆ. ಇದನ್ನು ಪತ್ನಿ ಪ್ರತಿಭಟಿಸಿದಾಗ ಪತಿ ಸಹಕರಿಸುವಂತೆ ಒತ್ತಾಯಿಸಿದ್ದಾರೆ. ನಾನು ದೇವಿ ಸ್ವರೂಪದವನು, ನನ್ನ ಬಯಕೆಯನ್ನು ಈಡೇರಿಸಿದರೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಇಬ್ಬರೂ ಮಹಿಳೆ ಮೇಲೆ ಹಲ್ಲೆ ನಡೆಸಿ, ಮಲಗುವ ಕೋಣೆಯಲ್ಲಿನ ಹಾಸಿಗೆಗೆ ಬೆಂಕಿ ಹಚ್ಚಿದ್ದಾರೆ. ನಂತರ, ಕಾರಿನಲ್ಲಿ ಪತಿಯ ಸೋದರನ ಮನೆಗೆ ಕರೆದುಕೊಂಡು ಹೋಗುವಾಗಲೂ ತೊಡೆಯ ಮೇಲೆ ಕುಳಿತುಕೊಳ್ಳಬೇಕು ಎಂದು ಸ್ವಾಮೀಜಿ ಬಲವಂತ ಮಾಡಿದ್ದಾರೆ. ಕಾರಿನಿಂದ ಇಳಿಯುತ್ತಿದ್ದಂತೆ ಮಹಿಳೆ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.