ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಅವಿಭಜಿತ ಜಿಲ್ಲೆಯೊಂದಿಗೆ ಅನಂತಕುಮಾರ್‌ ಅವಿನಾಭಾವ ಸಂಬಂಧ

ಕೇಂದ್ರ ಸಚಿವರ ನೆನಪಿನ ಸರಮಾಲೆ... ಸ್ಮರಣಾರ್ಹ... ಅನಂತ..!
Last Updated 12 ನವೆಂಬರ್ 2018, 20:13 IST
ಅಕ್ಷರ ಗಾತ್ರ

ವಿಜಯಪುರ:ಅನಂತಕುಮಾರ್‌ ಎಂದೊಡನೆ ಅವಿಭಜಿತ ಜಿಲ್ಲೆಯ ಕಾರ್ಯಕರ್ತರಲ್ಲಿ ಅಮಿತೋತ್ಸಾಹ. ಎರಡು ದಶಕದ ಹಿಂದೆಯೇ ಕೇಂದ್ರ ಸಚಿವರಾಗಿದ್ದರೂ; ಅಹಂ ಇಲ್ಲದ ವ್ಯಕ್ತಿ. ಕಾರ್ಯಕರ್ತರೊಡನೆ ಆತ್ಮೀಯವಾಗಿ ಬೆರೆಯುವ ಸರಳ ಜೀವಿ...

ನಮ್ಮ ಕುಟುಂಬದ ಹಿರಿಯಣ್ಣನಿದ್ದಂತೆ. ನಮ್ಮ ಕುಟುಂಬದ ಸದಸ್ಯರಲ್ಲೊಬ್ಬರು... ನಮ್ಮ ಪಾಲಿನ ನಾಯಕನಲ್ಲ. ಆತ್ಮೀಯ. ಆಪ್ತ, ಒಡನಾಡಿ... ಒಬ್ಬೊಬ್ಬರದ್ದು ಒಂದೊಂದು ನೆನಪಿನ ಬುತ್ತಿ. ಎಲ್ಲವೂ ವಿಭಿನ್ನ.

ಅನಂತ್‌ ಜತೆ ಆರಂಭದ ದಿನಗಳಲ್ಲಿ ಸೈಕಲ್‌ ಮೇಲೆ ಸಂಘಟನೆಗಾಗಿ ಕಾಲೇಜುಗಳಿಗೆ ಅಲೆದಾಡಿದವರು ಇದ್ದಾರೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಬೈಕ್‌ನ ಹಿಂಬದಿಯಲ್ಲಿ ಕೂರಿಸಿಕೊಂಡು ಅವಳಿ ಜಿಲ್ಲೆ ಸುತ್ತಾಡಿದವರು ಇಲ್ಲಿದ್ದಾರೆ. ಕುಟುಂಬದ ಸದಸ್ಯರಲ್ಲೊಬ್ಬರಾಗಿ ಗುರುತಿಸಿಕೊಂಡವರು ಬೆರಳೆಣಿಕೆ ಮಂದಿ.

ಅವಿಭಜಿತ ಜಿಲ್ಲೆಯೊಟ್ಟಿಗೆ ಅನಂತ್ ಅವಿನಾಭಾವ ಸಂಬಂಧ ಹೊಂದಿದ್ದರು. ಇಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರ ಪ್ರವಾಸ ಕೈಗೊಂಡರೆ ಕನಿಷ್ಠ ಹತ್ತಿಪ್ಪತ್ತು ಜನರ ಹೆಸರನ್ನು ಗುರುತು ಹಿಡಿದು ಕರೆಯುವಷ್ಟು ನೆನಪಿನ ಶಕ್ತಿ ಅವರಲ್ಲಿತ್ತು. ಇದು ಕಾರ್ಯಕರ್ತರ ಜತೆಗಿನ ಆಪ್ತತೆಗೆ ಸಾಕ್ಷಿಯಾಗಿತ್ತು.

1982ರಿಂದಲೂ ನಂಟು:

ಮೂರುವರೆ ದಶಕದಿಂದಲೂ ಅನಂತಕುಮಾರ್ ಅಖಂಡ ವಿಜಯಪುರ ಜಿಲ್ಲೆಯ ನಂಟು ಹೊಂದಿದ್ದರು. 1982ರಲ್ಲಿ ಎಬಿವಿಪಿ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಸಂಘಟನೆಗಾಗಿ ತಿಂಗಳಿಗೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತಿದ್ದರು.

ಎಬಿವಿಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಪ್ರೊ.ಸಿ.ಎಸ್‌.ಕಲ್ಮಠ ಅನಂತಕುಮಾರ್ ಸಂಘಟನಾ ಚತುರತೆ, ಚಾಣಾಕ್ಷ್ಯತನವನ್ನು ಆಗಲೇ ಗುರುತಿಸಿ, ಉನ್ನತ ಮಟ್ಟಕ್ಕೆ ಬೆಳೆಯುವೆ ಎಂದಿದ್ದರು. ಜಿಲ್ಲೆಯ ಹಿರಿಯರಾದ ಡಾ.ಮಹೇಂದ್ರಕರ, ಭೀಮಣ್ಣ ಕೋವಳ್ಳಿ, ಜೆ.ಎಸ್‌.ಹಿರೇಮಠರ ಮಾರ್ಗದರ್ಶನದಲ್ಲಿ ಯಶಸ್ವಿ ಸಂಘಟಕರಾಗಿ ರೂಪುಗೊಂಡರು.

ಅವಿಭಜಿತ ಜಿಲ್ಲೆಯಲ್ಲಿ ಅನಂತ ಶಿಷ್ಯಪಡೆ ಸಾಕಷ್ಟಿದೆ. ಶಂಭುಲಿಂಗ ಕಕ್ಕಳಮೇಲಿ, ಅಂಬರೀಶ ಪಾಟೀಲ, ಸುಧಾಕರ ಪೂಜಾರಿ ಸೇರಿದಂತೆ ಇನ್ನಿತರರು ನಿರಂತರ ಸಂಪರ್ಕದಲ್ಲಿದ್ದರು.

ಗಾಂಧಿಚೌಕ್‌ನ ಕಲ್ಪನಾ ಹೋಟೆಲ್ ಚಹಾ:

‘ಅನಂತಕುಮಾರ್ ಸರಳ ಜೀವಿ. ವಿಜಯಪುರ ಜಿಲ್ಲೆಯ ನಂಟು ಆರಂಭಗೊಂಡ ದಿನದಿಂದಲೂ, ದಶಕದ ಹಿಂದಿನವರೆಗೂ ಗಾಂಧಿಚೌಕ್‌ನಲ್ಲಿದ್ದ ಕಲ್ಪನಾ ಹೋಟೆಲ್‌ನಲ್ಲಿ (ಇದೀಗ ಶ್ರೀನಿಧಿ ಹೋಟೆಲ್‌) ಕಾರ್ಯಕರ್ತರೊಟ್ಟಿಗೆ ಚಹಾ ಕುಡಿಯುವುದು ಅವರಿಗೆ ತಪ್ಪದ ಅಭ್ಯಾಸವಾಗಿತ್ತು. ಇಲ್ಲಿಯೇ ಹರಟೆ, ಸಂಘಟನೆಯ ಕಾರ್ಯತಂತ್ರ ರೂಪುಗೊಳ್ಳುತ್ತಿತ್ತು’ ಎಂದು ಬಿಜೆಪಿ ಹಿರಿಯ ಮುಖಂಡ ಚಂದ್ರಶೇಖರ ಕವಟಗಿ ಸ್ಮರಿಸಿಕೊಂಡರು.

‘ಎಂದೆಂದೂ ಹೋಟೆಲ್‌ ಊಟ ಬಯಸಿದವರಲ್ಲ. ಲಾಡ್ಜ್‌ನಲ್ಲಿ ತಂಗಿದವರಲ್ಲ. ಸಂಘದ ನಿಷ್ಠಾವಂತ ಸ್ವಯಂ ಸೇವಕ. ತತ್ವಾದರ್ಶಗಳ ಪಾಲಕ. ಅದರಂತೆ ಕಾರ್ಯಕರ್ತರು, ಸ್ವಯಂ ಸೇವಕರ ಮನೆಯ ಊಟವೇ ಅವರಿಗೆ ಪ್ರೀತಿ. ಕೇಂದ್ರ ಸಚಿವರಾದ ಬಳಿಕ ಒಮ್ಮೆ ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭ ಹೋಟೆಲ್‌ನಲ್ಲಿ ಊಟ ಮಾಡಿದ್ದರು.

ಬೈಠಕ್ ಒಂದರಲ್ಲಿ ಈ ಬಗ್ಗೆ ಅನಂತ್ ಅವರನ್ನೇ ಪ್ರಶ್ನಿಸಿದೆ. ಶೇಖು ತಪ್ಪು ತಿಳಿಯಬೇಡ. ಅನಿವಾರ್ಯವಾಗಿ ಊಟ ಮಾಡಬೇಕಾಯಿತು. ನೀವು ಕರೆದಾಗ ಎಂದು ನಿಮ್ಮಗಳ ಮನೆಗೆ ಬಂದಿಲ್ಲ ಎಂದು ಪ್ರೀತಿಯಿಂದಲೇ ಉತ್ತರಿಸಿದ್ದರು’ ಎಂದು ಕವಟಗಿ ತಮ್ಮ ನೆನಪಿನ ಬುತ್ತಿಯಲ್ಲಿನ ಘಟನೆಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

ಕೊಟ್ಟ ಮಾತಿಗೆ ತಪ್ಪದವರು..!

‘ಅನಂತಕುಮಾರ್ ನಿಷ್ಠುರ, ನೇರ ನುಡಿಯವರು. ತಮ್ಮಿಂದ ಅಸಾಧ್ಯ ಎನ್ನುವ ಯಾವ ಕೆಲಸವನ್ನು ಎಂದೂ ಒಪ್ಪಿಕೊಂಡವರಲ್ಲ. ಕೊಟ್ಟ ಮಾತನ್ನು ತಪ್ಪಿದವರಲ್ಲ’ ಎನ್ನುತ್ತಾರೆ ಚಂದ್ರಶೇಖರ ಕವಟಗಿ.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ನಾನು, ಶಿವಾನಂದ ಕಲ್ಲೂರ ಕೆಲಸದ ನಿಮಿತ್ತ ಅನಂತ್ ಭೇಟಿಗೆ ಹೋಗಿದ್ದೆವು. ಇಬ್ಬರನ್ನು ಕೂರಿಸಿಕೊಂಡು ಅವಕಾಶವೊಂದಿದೆ. ಇಬ್ಬರೂ ನನಗೆ ಬೇಕಾದವರು. ನೀವೇ ನಿರ್ಧಾರ ಮಾಡಿಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದರು.

ಅದರಂತೆ ನಾವು ಮಾತಾಡಿಕೊಂಡು ಅನಂತ್ ಬಳಿ ಹೋಗುತ್ತಿದ್ದಂತೆ, ಅವರು ಕಲ್ಲೂರ ಈಶಾನ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷನಾಗು. ಶೇಖು ನೀನು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷನಾಗು. ನಿನಗೆ ಈಗಾಗಲೇ ವಿಧಾನ ಪರಿಷತ್ ಸ್ಪರ್ಧೆಗೆ ಅವಕಾಶ ನೀಡಿದ್ದೇವೆ. ಇದೀಗ ಕಲ್ಲೂರಗೆ ಅಧಿಕಾರ ಕೊಡೋಣ ಎಂದು ನೇರವಾಗಿಯೇ ಇಬ್ಬರಿಗೂ ಹೇಳಿದ್ದರು. ಅದರಂತೆ ನೇಮಕವೂ ನಡೆಯಿತು’ ಎಂದು ಕವಟಗಿ ತಿಳಿಸಿದರು.

ಕುಟುಂಬದ ಒಡನಾಡಿ ಕಲ್ಲೂರ

ಬಿಜೆಪಿ ಮುಖಂಡ ಶಿವಾನಂದ ಕಲ್ಲೂರ ಅನಂತಕುಮಾರ್ ಕುಟುಂಬದ ಒಡನಾಡಿಯಾಗಿದ್ದರು. ಬೆಂಗಳೂರಿಗೆ ಹೋದಾಗಲೆಲ್ಲ ರೊಟ್ಟಿ, ಚೋಡಾ ತೆಗೆದುಕೊಂಡು ಹೋಗುತ್ತಿದ್ದರು. ಅದೇ ರೀತಿ ಅನಂತ್ ಈ ಭಾಗಕ್ಕೆ ಭೇಟಿ ನೀಡಿದರೆ ಬಸವನಬಾಗೇವಾಡಿಯಲ್ಲಿದ್ದ ಕಲ್ಲೂರ ಮನೆಗೆ ಹಾಜರಿ ಹಾಕುವುದು ಕಾಯಂ ಆಗಿತ್ತು. ಈ ಸಂದರ್ಭ ಚೋಡಾ, ಮಿರ್ಚಿ ಬಜಿ ಇರಲೇಬೇಕಿತ್ತು.

ಅನಂತ್ ತಮ್ಮ ಪುತ್ರಿಯನ್ನು ಪುಣೆಯಲ್ಲಿ ವ್ಯಾಸಂಗಕ್ಕೆ ಬಿಡುವಾಗ ಕಲ್ಲೂರ ಅವರಿಗೆ ಜವಾಬ್ದಾರಿ ನೀಡಿದ್ದರು. ಶಿವಾನಂದನೇ ಪ್ರವೇಶ ಮಾಡಿಸಿ ಬಂದಿದ್ದ ಎಂಬುದನ್ನು ಹಳೆಯ ಒಡನಾಡಿಗಳು ಈಗಲೂ ಸ್ಮರಿಸುತ್ತಾರೆ.

ಕೆಲ ವರ್ಷಗಳ ಹಿಂದೆ ಶಿವಾನಂದ ಕಲ್ಲೂರ ಇದ್ದಕ್ಕಿಂದ್ದಂತೆ ಅನಾರೋಗ್ಯಕ್ಕೀಡಾದಾಗ ಆರೋಗ್ಯದ ಕಾಳಜಿಯನ್ನು ಅನಂತಕುಮಾರ್ ಸ್ವತಃ ವಹಿಸಿಕೊಂಡಿದ್ದರು. ವಿವಿಧೆಡೆ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದರು. ಖರ್ಚಿನ ಕೆಲ ಭಾಗವನ್ನು ಭರಿಸಿದ್ದರು ಎನ್ನುತ್ತಾರೆ ಬಸವನಬಾಗೇವಾಡಿಯ ಕಲ್ಲೂರ ಗೆಳೆಯರು.

ಶಾಂತಿ ಕುಟೀರದ ಶಿಷ್ಯ

ವಿಜಯಪುರ ತಾಲ್ಲೂಕಿನ ಕನ್ನೂರಿನ ಶಾಂತಿ ಕುಟೀರದ ಶಿಷ್ಯರಾಗಿದ್ದರು ಅನಂತಕುಮಾರ್. ಗಣಪತ ಮಹಾರಾಜರ ಪರಮ ಭಕ್ತರಾಗಿದ್ದರು. ಕುಟುಂಬ ಸಮೇತ ಹಲ ಬಾರಿ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದಿದ್ದಾರೆ. ಚುನಾವಣೆಗೆ ಮುನ್ನಾ, ಫಲಿತಾಂಶ ಪ್ರಕಟಗೊಂಡ ಬಳಿಕ, ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆಶ್ರಮಕ್ಕೆ ಭೇಟಿ ನೀಡಿದ್ದರು.

‘ನಂಗೂ ನೋಟಿಸ್ ಕೊಡ್ತೀರಾ..!’

‘ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕರಾಗಿದ್ದ ಶಂಕರ ಮೆಲ್ನಾಡ್ ಸಂಘದ ಸ್ವಯಂ ಸೇವಕರಾಗಿದ್ದರು. ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿದ್ದೀರಿ ಎಂದು ಅವರಿಗೆ ಎಸ್‌ಪಿ ಷೋಕಾಸ್ ನೋಟಿಸ್‌ ಕೊಟ್ಟಿದ್ದರು.

ಮೆಲ್ನಾಡ್‌, ಅನಂತಕುಮಾರ್ ಬಾಗಲಕೋಟೆಗೆ ಬಂದಾಗ ಈ ವಿಷಯ ತಿಳಿಸಿದರು. ಪ್ರವಾಸಿಮಂದಿರಕ್ಕೆ ಬಂದಿದ್ದ ಎಸ್‌ಪಿ ಅವರ ಜತೆ, ‘ನಾನು ಆರ್‌ಎಸ್‌ಎಸ್‌. ನಮ್ಮ ಪ್ರಧಾನಿ ವಾಜಪೇಯಿ ಅವರು ಆರ್ಎಸ್‌ಎಸ್‌. ನಮಗೂ ನೋಟಿಸ್ ಕೊಡ್ತೀರಾ’ ಎಂದು ಖಾರವಾಗಿ ಪ್ರಶ್ನಿಸಿದ್ದರು ಎಂಬುದನ್ನು ಕವಟಗಿ ನೆನಪಿಸಿಕೊಂಡರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT