ಬೆಂಗಳೂರು: ‘ಒಂದು ಕಾಲದಲ್ಲಿ ಮಲೆನಾಡು ಭಾಗದ ಒಕ್ಕಲಿಗರೆಲ್ಲ ಜೈನರಾಗಿದ್ದೆವು. ಈಗಲೂ ನಮ್ಮ ಮನೆಗಳಲ್ಲಿಹಬ್ಬದ ಸಂದರ್ಭದಲ್ಲಿ ‘ಜೈನ ಎಡೆ’ ಇಡುವ ಪ್ರತೀತಿ ಇದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ 35ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾರ್ಕಳದ ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಅವರಿಗೆ ‘ಮಹಾಕವಿ ರತ್ನಾಕರವರ್ಣಿ’ ಪ್ರಶಸ್ತಿ ಪ್ರದಾನ ಮಾಡಿ ಶುಕ್ರವಾರ ಮಾತನಾಡಿದರು.
‘ನಾನು ಜೈನ ಸಮುದಾಯಕ್ಕೆ ಸೇರಿದವನು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಭಾವಿಸಿದ್ದರು. ನನ್ನ ಹೆಸರು ನೋಡಿ ಅವರಿಗೆ ಹಾಗನಿಸಿತ್ತು. ಈ ಕುರಿತು ಒಮ್ಮೆ ಕರೆದು ಕೇಳಿದ್ದರು’ ಎಂದು ಹೇಳಿದರು.
‘ಜೈನ ಸಮುದಾಯದವರು ಸಾಹಿತ್ಯ ಹಾಗೂ ವಿದ್ವತ್ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ರತ್ನಾಕರವರ್ಣಿಯವರು ನಮ್ಮ ನಡುವಣ ಕವಿ. ಸಮಾಜವು ತನ್ನ ಕೃತಿ ಸ್ವೀಕರಿಸಲಿಲ್ಲ ಎಂದು ನೊಂದು ಅವರು ಜೈನ ಸಮುದಾಯವನ್ನೇ ತ್ಯಜಿಸಲು ನಿರ್ಧರಿಸಿದ್ದರಂತೆ’ ಎಂದರು.
ಪ್ರಶಸ್ತಿ ಪುರಸ್ಕೃತಮುನಿರಾಜ ರೆಂಜಾಳ, ‘ಯಾವ ವಿದ್ಯಾಪೀಠದಿಂದ ವಿದ್ಯೆ ಕಲಿತು, ಧರ್ಮದ ಶಿಕ್ಷಣ ಸ್ವೀಕರಿಸಿದ್ದೆನೋ ಅಂತಹ ಗುರುಪೀಠದ ಗುರುಗಳ ಸಾನಿಧ್ಯದಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ನನ್ನ ಪಾಲಿನ ಸೌಭಾಗ್ಯ’ ಎಂದು ಸಂತಸ ವ್ಯಕ್ತಪಡಿಸಿದರು.
ಜಯಲಕ್ಷ್ಮಿ ಅಭಯ ಕುಮಾರ್ ಅವರ ‘ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರು’ ಕೃತಿ ಬಿಡುಗಡೆ ಮಾಡಿ ಮಾತನಾಡಿದಪತ್ರಕರ್ತಪದ್ಮರಾಜ ದಂಡಾವತಿ, ‘ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರೆಲ್ಲರೂ ಜೈನ ಸಮುದಾಯದ ಶಿರೋಮಣಿಗಳು. ಈವರೆಗೆ ಪ್ರಶಸ್ತಿ ಪಡೆದ 17 ಮಂದಿಯ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ’ ಎಂದು ತಿಳಿಸಿದರು.