ಮಂಗಳೂರು: ‘ಉಳ್ಳಾಲದಲ್ಲಿ ಮುಸ್ಲಿಂ ಅಲ್ಲದವರನ್ನು ಶಾಸಕರನ್ನಾಗಿ ಮಾಡುವ ತಾಕತ್ತು ಇದೆಯಾ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ಟ ಸವಾಲು ಹಾಕಿದರು.
ಈ ಹಿಂದೆ ‘ಉಳ್ಳಾಲವನ್ನು ಪಾಕಿಸ್ತಾನ’ ಎಂದು ಕರೆದಿದ್ದ ಅವರು, ಈ ಕುರಿತು ನಗರದಲ್ಲಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಹೇಳಿಕೆಯು ವೈರಲ್ ಆಗಿದೆ.
‘ಉಳ್ಳಾಲವನ್ನು ಪಾಕಿಸ್ತಾನ ಎಂದು ಕರೆದಿರುವುದಕ್ಕೆ ಪಶ್ಚಾತಾಪ ಇಲ್ಲ. ಪಾಕಿಸ್ತಾನವೂ ವಿಭಜನೆಗೆ ಮೊದಲು ಭಾರತದಲ್ಲೇ ಇತ್ತು. ವಿಭಜನೆ ಬಳಿಕ ಅಲ್ಲಿನ ಜನರ ಮಾನಸಿಕತೆಯೇ ಬದಲಾಯಿತು. ಆ ಭೂಮಿ ಕೆಂಪಾಯಿತು. ಅಲ್ಲಿನ ಹಿಂದೂಗಳ ಮೇಲೆ ಅತ್ಯಾಚಾರ, ಮತಾಂತರ ನಡೆಯಿತು. ಅಲ್ಲಿನ ದೇವಸ್ಥಾನ ಪುಡಿ ಮಾಡಿದರು. ಹಿಂದೂಗಳಿಗೆ ಬದುಕಲು ಕಷ್ಟವಾಯಿತು. ಅದೇ ವಾತಾವರಣ ಈಗ ಉಳ್ಳಾಲದಲ್ಲಿ ಕಾಣುತ್ತಿದ್ದೇವೆ’ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
‘ಉಳ್ಳಾಲದಲ್ಲಿ ಮೊಗವೀರರು ಕೆಲಸಕ್ಕೆ ಹೋಗಿದ್ದಾಗ, ಅವರ ಮನೆಯಲ್ಲಿದ್ದ ಹೆಣ್ಣುಮಕ್ಕಳ ಮೇಲೆ ಆಕ್ರಮಣ ನಡೆದಿತ್ತು. ಹಿಂದೂ ಕೊಲೆ, ಚೂರಿ ಹಾಕುವ ಕೆಲಸ, ಲವ್ ಜಿಹಾದ್, ಗೋಹತ್ಯೆ ನಡೀತಾ ಇದೆ. ಇದು ಪಾಕಿಸ್ತಾನ ಅಲ್ಲದೇ ಇನ್ನೇನು? ಅಲ್ಲಿಗೂ ಇಲ್ಲಿಗೂ ವ್ಯತ್ಯಾಸ ಏನಿದೆ’ ಎಂದು ಪ್ರಶ್ನಿಸಿದರು.
‘ನಾವು ಮುಸ್ಲಿಂ, ಕ್ರೈಸ್ತರನ್ನು ಶಾಸಕರನ್ನಾಗಿ ಮಾಡಿದ್ದೇವೆ. ಆದರೆ, ಪಾಕಿಸ್ತಾನದಲ್ಲಿ ಮಾಡುವುದಿಲ್ಲ. ಅದೇ ರೀತಿ ಉಳ್ಳಾಲದಲ್ಲಿಯೂ ಮಾಡುತ್ತಿಲ್ಲ’ ಎಂದ ಅವರು, ‘ಭಾರತದ ಜನರ ಭಾವನೆಗೆ ದನಿಗೂಡಿಸಿ ಎಂದು ಅಲ್ಲಿನವರಿಗೆ ನಾವು ಹೇಳುತ್ತಿದ್ದೇವೆ’ ಎಂದರು.