ಹೊಸಪೇಟೆ: ‘ಆಪರೇಷನ್ ಕಮಲ’ದ ಮಾತುಗಳು ಕೇಳಿ ಬರುತ್ತಿರುವುದರ ನಡುವೆಯೇ ಮೂರು ದಿನಗಳಿಂದ ಕಣ್ಮರೆಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಗುರುವಾರ ನಗರದಲ್ಲಿ ದಿಢೀರ್ ಪ್ರತ್ಯಕ್ಷವಾದರು.
‘ನಾನು ಮುಂಬೈಗೆ ಹೋಗಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವ ಸುದ್ದಿ ಸುಳ್ಳು. ಚಿಕ್ಕಮಗಳೂರಿನ ಅಂಬರ್ ವ್ಯಾಲಿಯಲ್ಲಿ ನನ್ನ ಮಗ ಓದುತ್ತಿದ್ದು, ಅವನನ್ನು ನೋಡಲು ಅಲ್ಲಿಗೆ ಹೋಗಿದ್ದೆ. ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲಿಗೂ ಹೋಗಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಕಂಪ್ಲಿ ಕ್ಷೇತ್ರದ ಅಭಿವೃದ್ಧಿಯಾಗಬೇಕು ಎನ್ನುವುದು ನನ್ನ ಬೇಡಿಕೆ. ಆದರೆ, ಅತೃಪ್ತರ ಬಣದಲ್ಲಿ ನಾನು ಗುರುತಿಸಿಕೊಂಡಿಲ್ಲ. ಶಾಸಕರಾದ ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ ಅವರ ಮನವೊಲಿಸುವಷ್ಟು ನಾನು ದೊಡ್ಡವನಲ್ಲ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.