ಬೆಂಗಳೂರು: ರಾಜ್ಯದಲ್ಲಿ ಸದ್ಯ ಉದ್ಭವಿಸಿರುವ ರಾಜಕೀಯ ಬೆಳವಣಿಗೆಗಳು, ಪಕ್ಷಾಂತರಗಳಿಗೆ ಮೂರೂ ಪಕ್ಷಗಳು ಕಾರಣ. ರಾಜಕೀಯ ವ್ಯವಸ್ಥೆಯ ಆತ್ಮವೇ ದಾಳಿಗೊಳಗಾಗುತ್ತಿದ್ದು, ಅದನ್ನು ಸರಿಪಡಿಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿಧಾನ ಸಭಾಧ್ಯಕ್ಷರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಇಬ್ಬರೂ ಜತೆಯಾಗಿ ಪತ್ರ ಬರೆದಿದ್ದು, ‘ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವ ನೀವು, ನಿಮ್ಮ ವ್ಯಕ್ತಿಗತ ನಿಲುವು ಏನೇ ಇದ್ದರೂ ತಪ್ಪಾದ ಮತ್ತು ಆತುರದ ನಿರ್ಧಾರಕ್ಕೆ ಬರಬಾರದು, ಇದನ್ನೇ ನಮ್ಮ ದೂರು ಎಂದೇ ಪರಿಗಿಣಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಅಗತ್ಯಬಿದ್ದರೆ ಉನ್ನತ ನ್ಯಾಯಾಲಯದ ಮೊರೆ ಹೋಗಲೂ ನಾವು ನಿರ್ಧರಿಸಿದ್ದೇವೆ. ಸಂವಿಧಾನಬದ್ಧ ಅಧಿಕಾರ ಹೊಂದಿರುವ ನೀವುಅಂತಹ ಪರಿಸ್ಥಿತಿ ಬಾರದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತೀರಿ ಎಂದು ಆಶಿಸುತ್ತೇವೆ’ ಎಂದು ಹೇಳಿದ್ದಾರೆ.
ಪಕ್ಷಕ್ಕೆ, ರಾಜ್ಯಕ್ಕೆ ದ್ರೋಹ ಬಗೆದು ರಾಜೀನಾಮೆ ನೀಡಿದವರನ್ನು ಆರುವರ್ಷಗಳ ಮಟ್ಟಿಗೆ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ, ಯಾವ ಅಧಿಕಾರವೂ ಹೊಂದಿರದಂತಹ ನಿಯಮ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.