ಬೆಂಗಳೂರು: ಕೊರೊನಾ ಸೋಂಕು ಕಾರಣ ಲಾಕ್ಡೌನ್ ಜಾರಿಯಾಗುತ್ತಿದ್ದಂತೆ ಚಾಲಕ ವೃತ್ತಿಯನ್ನೇ ನಂಬಿಕೊಂಡಿದ್ದ ಚಾಲಕರು ತೀವ್ರ ತೊಂದರೆಗೆ ಒಳಗಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳುಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ“ಸೆಲ್ಪಿ ವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ” ಅಭಿಯಾನಆರಂಭಿಸಿದ್ದಾರೆ.
ಇದರ ಜೊತೆಗೆ ಚಾಲಕರು ಕಪ್ಪು ಪಟ್ಟಿ ಧರಿಸಿ ಈಅಭಿಯಾನ ಆರಂಭಿಸಿದ್ದು,ಈ ಅಭಿಯಾನ ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.
ಲಾಕ್ಡೌನ್ ಜಾರಿಯಾಗಿ ಒಂದೂವರೆ ತಿಂಗಳು ಸಮೀಪಿಸುತ್ತಿದ್ದರೂ ಚಾಲಕರ ಸಂಕಷ್ಟಗಳಿಗೆ ಈವರೆಗೆ ಸ್ಪಂದಿಸದೆ ಸರ್ಕಾರಗಳುನಿರ್ಲಕ್ಷ್ಯತೋರಿವೆ ಎಂದುಸಮಗ್ರ ಚಾಲಕರ ಒಕ್ಕೂಟ ಬೃಹತ್ ಪ್ರತಿಭಟನೆ ಪ್ರಾರಂಭವಾಗಿದೆ.
ಕೆಲಸವಿಲ್ಲದೇ ಮನೆಯಲ್ಲಿಯೇ ಇರುವ ಚಾಲಕರು ಖಾಲಿ ತಪ್ಪಲೆ, ತಟ್ಟೆಗಳ ಮುಂದೆ ಕುಳಿತು ಕಪ್ಪುಪಟ್ಟಿ ಧರಿಸಿ ಸೆಲ್ಪಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ವಿನೂತನ ಚಳವಳಿ ಆರಂಭಿಸಿದ್ದಾರೆ.
ಮನೆಗಳಿಂದಲೇ ಚಾಲಕರು ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೆಲ್ಪಿ ತೆಗೆದು ಕೇಂದ್ರ ಮತ್ತು ರಾಜ್ಯ ಸರ್ಕಾರಳಿಗೆ ರವಾನಿಸಬೇಕು. ಫೇಸ್ ಬುಕ್, ವ್ಯಾಟ್ಸ್ ಆಪ್, ಇನ್ಸ್ಟ್ರಾಗ್ರಾಂ, ಟ್ವಿಟರ್, ಟೆಲಿಗ್ರಾಂ ಸೇರಿದಂತೆ ಎಲ್ಲಾ ಬಗೆಯ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಬೇಕು. ಪ್ರತಿಯೊಬ್ಬ ಚಾಲಕರು ತಮ್ಮ ಪೋಸ್ಟ್ಗಳನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟ ಸದಸ್ಯರು, ಶಾಸಕರಿಗೆ ತಲುಪುವಂತೆ ಮಾಡಬೆಕು. ಇವರೆಲ್ಲರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಿಗೆ ಟ್ಯಾಗ್ ಮಾಡಿ ಚಳವಳಿಯನ್ನು ಉಗ್ರ ಸ್ವರೂಪಕ್ಕೆ ಕೊಂಡೊಯ್ಯಬೇಕು ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಗಂಡಸಿ ಸದಾನಂದಸ್ವಾಮಿಕೋರಿದ್ದಾರೆ.
ದೆಹಲಿಯ ಆಮ್ ಆದ್ಮಿ ಸರ್ಕಾರ, ಮಹಾರಾಷ್ಟ್ರದ ಶಿವಸೇನೆ – ಕಾಂಗ್ರೆಸ್ – ಎನ್.ಸಿ.ಪಿ ಸರ್ಕಾರ ಹಾಗೂ ಆಂಧ್ರ ಪ್ರದೇಶದ ವೈ.ಎಸ್.ಆರ್ ಕಾಂಗ್ರೆಸ್ ಸರ್ಕಾರ ಚಾಲಕರ ಖಾತೆಗಳಿಗೆ ಹತ್ತು ಸಾವಿರ ರೂ ಹಣ ಜಮಾ ಮಾಡಿ ಸಂಕಷ್ಟಕ್ಕೆ ಸ್ಪಂದಿಸಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಚಾಲಕರಿಗೆ ಆರ್ಥಿಕ ನೆರವು ನೀಡುವಂತೆ ಮಾಡಿದ ಮನವಿಗೆ ಕವಡೆಕಾಸಿನ ಕಿಮ್ಮತ್ತು ದೊರೆತಿಲ್ಲ ಎಂದು ಗಂಡಸಿ ಸದಾನಂದ ಸ್ವಾಮಿ. ಹಾಗೂ ಕೆ. ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಇಲಾಖೆ ಜವಾಬ್ದಾರಿ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯದಂತಾಗಿದೆ. ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಅವರು ನಾಪತ್ತೆಯಾಗಿದ್ದಾರೆ. ಕನಿಷ್ಠ ಪಕ್ಷ ನಮ್ಮ ನೋವುಗಳಿಗೆ ಪರಿಹಾರ ನೀಡುವುದಿರಲಿ, ನಮ್ಮ ಸಮಸ್ಯೆಗಳನ್ನು ಕೇಳುವ ಸೌಜನ್ಯವನ್ನು ತೋರುತ್ತಿಲ್ಲ.ಸಚಿವಸಂಕಷ್ಟ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪಡಿತರ ಧಾನ್ಯ ದೊರೆತಿರುವುದು ಬಿಟ್ಟರೆ ಉಳಿದ ಚಾಲಕರಿಗೆ ಸರ್ಕಾರದಿಂದ ಯಾವುದೇ ಅನುಕೂಲವಾಗಿಲ್ಲ. ನಮ್ಮ ನೋವನ್ನು ಆಳುವ ವರ್ಗ ಕೇಳಿಸಿಕೊಂಡರೂ ಸ್ಪಂದಿಸದೇ ನಿರ್ಲಕ್ಷಿಸಿದೆ ಎಂದಿದ್ದಾರೆ.
ದೇಶದಲ್ಲಿ ಸುಮಾರು 218,288.000ಕ್ಕೂ ಹೆಚ್ಚು ಲಾರಿ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ವಾಣಿಜ್ಯ ಬಳಕೆ ವಾಹನಗಳ ಚಾಲಕರಿದ್ದಾರೆ. ಲಾಕ್ಡೌನ್ ಪರಿಸ್ಥಿತಿಯಲ್ಲಿ ಒಂದು ರೂಪಾಯಿ ದುಡಿಯಲು ನಮಗೆ ಸಾಧ್ಯವಾಗಿಲ್ಲ. ಮಕ್ಕಳ ವಿದ್ಯಾಭ್ಯಾಸ, ಸಾಲ ಪಾವತಿ, ಕುಟುಂಬ ನಿರ್ವಹಣೆಗೆ ಮುಂದೇನು ಎನ್ನುವ ಆತಂಕದಲ್ಲಿದ್ದೇವೆ. ಈಗಾಗಲೇ ಚಾಲಕರ 120ಕ್ಕೂ ಹೆಚ್ಚು ಶಾಖೆಗಳಿಂದ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ನಮ್ಮ ಸಮಸ್ಯೆಗಳನ್ನು ವಿವರಿಸಿದ್ದೇವೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನಮಗೆ ನ್ಯಾಯ ದೊರೆತಿಲ್ಲ ಎಂದು ಸದಾನಂದಸ್ವಾಮಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.