ಹುಕ್ಕೇರಿ (ಬೆಳಗಾವಿ ಜಿಲ್ಲೆ): ‘ಮೈಸೂರಿನಲ್ಲಿ ಒಂದೆಡೆ ಮಹಿಷಾಸುರ ಮರ್ದಿನಿಯ ದಸರೆ ಸರ್ಕಾರವೇ ಆಚರಿಸುತ್ತದೆ. ಇನ್ನೊಂದೆಡೆ, ಮಹಿಷ ದಸರೆಗೂ ಅವಕಾಶ ನೀಡುತ್ತದೆ. ಇದು ಸರ್ಕಾರದ ಇಬ್ಬಗೆಯ ನೀತಿ. ಇದರಿಂದ ಭವಿಷ್ಯದ ಪೀಳಿಗೆಗೆ ಕೆಟ್ಟ ಸಂದೇಶ ಹೋಗುತ್ತದೆ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ತಿಳಿಸಿದರು.
‘ಮಹಿಷಾಸುರ ಮರ್ದಿನಿ ಎಂದರೆ ರಾಕ್ಷಸನ ಸಂಹಾರ ಮಾಡಿದವಳು ಎಂದರ್ಥ. ಈ ನೆನಪಿಗಾಗಿ ಪೌರಾಣಿಕ ಕಾಲದಿಂದ ದಸರೆ ಆಚರಿಸಲಾಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಕೆಲವರು ಮಹಿಷ ದಸರೆ ಆಚರಿಸುತ್ತಾರೆ. ಇದು ಯಾವ ಸಂದೇಶ ನೀಡುತ್ತದೆ? ಕೆಟ್ಟ ಪರಂಪರೆಗೆ ಮಣೆ ಹಾಕುವ ಸರ್ಕಾರದ ನಡೆ ಸರಿಯಲ್ಲ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಸಮಾಜದ ಖ್ಯಾತನಾಮರ ಹೆಸರು ಬಳಸಿಕೊಂಡು ಕೆಲವು ಮುಖಂಡರು ಇಲ್ಲಸಲ್ಲದ ಆಚರಣೆಗಳನ್ನು ಮಾಡುತ್ತಿದ್ದಾರೆ. ಸಮಾಜದಲ್ಲಿ ಎಲ್ಲರೂ ಒಂದಾಗಿ ಶಾಂತಿಯಿಂದ ಬಾಳಬೇಕು ಎಂಬುದು ಹಬ್ಬದ ಸಂದೇಶ. ಪ್ರಚಾರಕ್ಕಾಗಿ ಏನೇನೋ ಆಚರಿಸಬಾರದು. ಸಮಾಜದ ಶಾಂತಿ ಕದಡುವ ಹಕ್ಕು ಯಾರಿಗೂ ಇಲ್ಲ’ ಎಂದರು.