ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಜಯಂತಿ: ಅ.15ರಿಂದ ಮಹಾ ಕುಂಭಮೇಳ

ತ್ರಿವೇಣಿ ಸಂಗಮದಲ್ಲಿ ಮೂರು ದಿನ ಮಹೋತ್ಸವ: 13ರಿಂದ ಜ್ಯೋತಿಯಾತ್ರೆ
Last Updated 20 ಆಗಸ್ಟ್ 2022, 20:34 IST
ಅಕ್ಷರ ಗಾತ್ರ

ಬೆಂಗಳೂರು: ಮಲೇಮಹದೇಶ್ವರ ಜಯಂತಿ ಮಹೋತ್ಸವ ಮತ್ತು ಮಹಾ ಕುಂಭಮೇಳವನ್ನು ಅಕ್ಟೋಬರ್ 15ರಿಂದ ಮೂರು ದಿನ ನಡೆಸಲು ಮಹೋತ್ಸವ ಸಮಿತಿ ತೀರ್ಮಾನಿಸಿದೆ.

ಆದಿಚುಂಚನಗಿರಿ ವಿಜಯನಗರ ಶಾಖೆಯಲ್ಲಿ ನಡೆದ ಸಭೆಯಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮೀಜಿ,ಶ್ರೀರಂಗಪಟ್ಟಣದ ಬೇಬಿಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಕ್ರೀಡಾ ಸಚಿವ ನಾರಾಯಣಗೌಡ, ಅಬಕಾರಿ ಸಚಿವ ಕೆ.ಗೋಪಾಲಯ್ಯ ಪಾಲ್ಗೊಂಡು ಮಹೋತ್ಸವದ ಬಗ್ಗೆ ಚರ್ಚಿಸಿದರು.

ಮಹದೇಶ್ವರರು ಶ್ರೀಶೈಲದಿಂದ ಬಂದು ಮೊದಲು ಪಾದಸ್ಪರ್ಶ ಮಾಡಿದ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಕರಹಳ್ಳಿ–ಸಂಗಾಪುರ–ಪುರ ಗ್ರಾಮಗಳ ತ್ರಿವೇಣಿ ಸಂಗಮದಲ್ಲಿ ಇದೇ ಮೊದಲ ಬಾರಿಗೆ ಕುಂಭ ಮೇಳ ಪುಣ್ಯ ಸ್ನಾನ ನಡೆಯಲಿದೆ. ಸರ್ವಧರ್ಮ ಸಮ್ಮೇಳನ, ಧಾರ್ಮಿಕ ಕಾರ್ಯಕ್ರಮಗಳು, ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶ ಹಲವೆಡೆಯಿಂದ ಸಾಧು ಸಂತರು, ಬಿಷಪ್‌ಗಳು, ಮೌಲ್ವಿಗಳು ಸೇರಿ 300ಕ್ಕೂ ಹೆಚ್ಚು ಧಾರ್ಮಿಕ ಗುರುಗಳು ಭಾಗವಹಿಸಲಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಕುಂಭಮೇಳದ ಅಂಗವಾಗಿ ಅ.13ರಂದು ಮಲೆಮಹದೇಶ್ವರ ಬೆಟ್ಟದಿಂದ ಜ್ಯೋತಿಯಾತ್ರೆ ಹೊರಡಲಿದೆ. ಹನೂರು, ಕೊಳ್ಳೇಗಾಲ, ಮಳವಳ್ಳಿ, ಮದ್ದೂರು, ಮಂಡ್ಯ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಎಸ್‌, ಕೆ.ಆರ್.ಪೇಟೆ, ಅಂಬಿಗರಹಳ್ಳಿ ಮೂಲಕ ಅ.15ರಂದು ತ್ರಿವೇಣಿ ಸಂಗಮ ತಲುಪಲಿದೆ. ಮಹೋತ್ಸವ ಮತ್ತು ಮಹಾ ಕುಂಭಮೇಳವನ್ನು ಯಶಸ್ವಿಯಾಗಿ ನಡೆಸಲು ಸಭೆ ತೀರ್ಮಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT