ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು, ಟನಲ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು.
ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಅವರು ಈ ವಿಷಯ ತಿಳಿಸಿದರು.
ಟನಲ್ ನಿರ್ಮಾಣದ ಕುರಿತು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳ ಪ್ರದೇಶಗಳಿಗೆ 775 ಎಂಎಲ್ಡಿ ಹೆಚ್ಚುವರಿ ಕುಡಿಯುವ ನೀರನ್ನು ಪೂರೈಸುವ ಯೋಜನೆಯಾದ ಕಾವೇರಿ ನೀರು ಸರಬರಾಜು 5 ನೇ ಹಂತ ಯೋಜನೆಯನ್ನು ಮುಂಬರುವ ಮಾರ್ಚ್ ಕಾರ್ಯಾರಂಭಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಬಿಎಸ್ಆರ್ಪಿ:
ಬೆಂಗಳೂರು ಉಪನಗರ ರೈಲ್ವೆ ಯೋಜನೆಯಡಿ (ಬಿಎಸ್ಆರ್ಪಿ) ಬೈಯಪ್ಪನಹಳ್ಳಿ– ಚಿಕ್ಕಬಾಣಾವರ ಕಾರಿಡಾರ್ ಪ್ರಗತಿಯಲ್ಲಿದೆ. ಹೀಲಲಿಗೆ– ರಾಜಾನುಕುಂಟೆ ಕಾರಿಡಾರ್ನ ಸಿವಿಲ್ ಕಾಮಗಾರಿ ಟೆಂಡರ್ ಅನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಗೆಹಲೋತ್ ಹೇಳಿದರು.
ಬೆಂಗಳೂರು ಮೆಟ್ರೊ ಹಂತ–2ರಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗೆ 3.3 ಕಿ.ಮೀ ಉದ್ದದ 16 ನಿಲ್ದಾಣಗಳನ್ನು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಿಸುತ್ತಿದ್ದು, ಶೇ 98 ರಷ್ಟು ಕೆಲಸ ಮುಗಿದಿದೆ. ಜುಲೈ ಒಳಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.