ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಎಚ್‌’ ನಿರ್ಮಾಣಕ್ಕೆ ಕೆರೆ ಹೂಳು

1,038 ಕೆರೆ ಅಭಿವೃದ್ಧಿ; ತುಮಕೂರು ಜಿಲ್ಲೆಯಲ್ಲಿ ಅಧಿಕ
Last Updated 17 ಜುಲೈ 2022, 19:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳು (ಎನ್‌ಎಚ್‌) ನಿರ್ಮಾಣವಾಗುವ ಸಂದರ್ಭದಲ್ಲೇ 1,038 ಕೆರೆಗಳ ಹೂಳೆತ್ತಿ, ಏರಿ ಭದ್ರ ಮಾಡುವ ಯೋಜನೆಗೆ ಲೋಕೋಪಯೋಗಿ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಕೆರೆಗಳ ಹೂಳನ್ನು ಬಳಸಿಕೊಳ್ಳಬೇಕು. ವೈಜ್ಞಾನಿಕ ರೀತಿಯಲ್ಲಿ ಹೂಳನ್ನು ತೆಗೆದುಕೊಳ್ಳಬಹುದು. ಹೆದ್ದಾರಿ ನಿರ್ಮಾಣವಾಗುವ 5 ಕಿ.ಮೀ ಸುತ್ತಳತೆಯಲ್ಲಿರುವ ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರದಿಂದ ವೆಚ್ಚ ಇರುವುದಿಲ್ಲ. ಗುತ್ತಿಗೆದಾರರೇ ಕಾಮಗಾರಿ ಮಾಡಲಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ.

‘ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಹಯೋಗದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳ್ಳುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯಕ್ಕೆ ಭೇಟಿ ಕೊಟ್ಟಾಗ ಘೋಷಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಈ ಯೋಜನೆ ಅನುಷ್ಠಾನದ ಬಗ್ಗೆ ಪ್ರಕಟಿಸಿದ್ದರು. ಅದರಂತೆ ಸಣ್ಣ ನೀರಾವರಿ ಇಲಾಖೆಯಿಂದ ಯೋಜನೆಗೆ ಸಹಮತಿ ಪಡೆಯಲಾಗಿದೆ. ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ಈ ಯೋಜನೆ ಜಾರಿಯಾಗುತ್ತಿದೆ’ ಎಂದರು.

‘ಹೆದ್ದಾರಿ ಗುತ್ತಿಗೆದಾರರು ಅವಶ್ಯವಿರುವ ಮಣ್ಣನ್ನು ಸ್ಥಳೀಯವಾಗಿ ಖರೀದಿಸುತ್ತಿದ್ದರು. ಈಗ ಅವರು ಮಣ್ಣನ್ನು ಹೆದ್ದಾರಿ ಪಕ್ಕದಲ್ಲಿರುವ ಕೆರೆಗಳಿಂದಲೇ ತೆಗೆಸಿ ಬಳಸಿಕೊಳ್ಳಬಹುದು. ಇದರಿಂದ ಕೆರೆಯ ಜೀರ್ಣೋದ್ಧಾರವಾಗುತ್ತದೆ. ಕೆರೆಗಳಲ್ಲಿ ನೀರು ನಿಂತು, ಅಂತರ್ಜಲ ವೃದ್ಧಿಸಿದಂತಾಗುತ್ತದೆ. ‘ಅಮೃತ ಸರೋವರ ನಿರ್ಮಾಣ’ ಅಂಗವಾಗಿ ಈ ಯೋಜನೆ ರಾಜ್ಯದಲ್ಲಿಯೂ ಜಾರಿಯಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಗುತ್ತಿಗೆದಾರರು ಅಥವಾ ರಸ್ತೆ ನಿರ್ಮಾಣ ಪ್ರಾಧಿಕಾರವು ಕೆರೆಗಳಿಂದ ಹೂಳು ತೆಗೆಯಲು ಸರ್ಕಾರಕ್ಕೆ ಶುಲ್ಕ ನೀಡಬೇಕಾಗಿಲ್ಲ ಮತ್ತು ಈ ಹೂಳನ್ನು ರಸ್ತೆ ನಿರ್ಮಾಣಕ್ಕಲ್ಲದೇ ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಕೆರೆಯ ಸಂರಕ್ಷಣೆಗೆ ಅಪಾಯವಾಗದಂತೆ ಏನೆಲ್ಲ ಮುಂಜಾಗ್ರತೆ ಕೈಗೊಳ್ಳಬೇಕು ಎಂಬ ಬಗ್ಗೆ ನಮ್ಮ ಲೋಕೋಪಯೋಗಿ ಇಲಾಖೆಯಿಂದ ವಿವರವಾದ ಮಾರ್ಗಸೂಚಿಯನ್ನು ಈಗಾಗಲೇ ಹೊರಡಿಸಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT