ಬೆಂಗಳೂರು: ಕಳೆದ ಜೂನ್ 23ರಂದು ಪಟ್ನಾದಲ್ಲಿ ವಿರೋಧ ಪಕ್ಷಗಳು ಮೊದಲ ಸಭೆ ನಡೆಸಿದ್ದೆವು ಆ ಸಭೆ ಯಶಸ್ವಿಯಾಗಿತ್ತು. ಇದೀಗ ಮಂದುವರೆದ ಭಾಗವಾಗಿ ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ಒಟ್ಟು 26 ರಾಜಕೀಯ ಪಕ್ಷಗಳು ಭಾಗವಹಿಸುತ್ತಿವೆ. ಇಂದು ಸಿಎಂ ಸಿದ್ದರಾಮಯ್ಯ ಭೋಜನ ಕೂಟ ಆಯೋಜಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ವೇದಿಕಯಡಿ ಸೇರುತ್ತಿವೆ ಎಂದಿದ್ದಾರೆ.
ಕೇಂದ್ರದ ಸೇಡಿನ ನಡೆಯಿಂದ ರಾಹುಲ್ ಗಾಂಧಿ ಅವರನ್ನ ಸಂಸತ್ ಸ್ಥಾನದಿಂದ ವಜಾ ಮಾಡಲಾಗಿದೆ. ಮಣಿಪುರದಲ್ಲಿ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದರೂ ಅವರ ಕಷ್ಟ ಆಲಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿಲ್ಲ. ಈ ಸಭೆಯಲ್ಲಿ ಭವಿಷ್ಯದ ನಡೆ ಬಗ್ಗೆ ಸ್ಪಷ್ಟ ತೀರ್ಮಾನ ಮಾಡಲಾಗುವುದು. ಲೋಕಸಭಾ ಚುನಾವಣಾ ತಂತ್ರಗಾರಿಕೆ ಬಗ್ಗೆಯೂ ಚರ್ಚಿಸಲಾಗುವುದು. ಪ್ರಜಾಪ್ರಭುತ್ವ, ಸಂವಿಧಾನದ ಉಳಿಯಬೇಕಿದೆ. ಇದೇ ಕಾರಣಕ್ಕೆ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ವೇಣುಗೋಪಾಲ್ ಹೇಳಿದರು.
ಬಿಜೆಪಿ ವಿರೋಧಿಗಳ ಧ್ವನಿ ಅಡಗಿಸುತ್ತಿದೆ. ರಾಹುಲ್ ಗಾಂಧಿ ಅವರನ್ನ ಅನರ್ಹ ಮಾಡಿರುವುದು ಇದಕ್ಕೆ ಉದಾಹರಣೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕೂಡ ಇದೇ ಕಾರಣಕ್ಕೆ ಆಗಿದೆ. ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿ ವಿಪಕ್ಷಗಳ ಧ್ವನಿ ಅಡಗಿಸಲಾಗುತ್ತಿದೆ ಎಂದು ದೂರಿದರು.
ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆ ಹೆಚ್ಚಿದೆ. ಜನರಿಗೆ ಇದೆಲ್ಲದರ ಅರಿವು ಇದೆ. ಅವರಿಗೆ(ಬಿಜೆಪಿ) ಯಾವ ಪಾಠ ಕಲಿಸಬೇಕು ಅಂತ ಅವರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
26 ವಿಪಕ್ಷಗಳು ಒಟ್ಟಿಗೆ ಮುನ್ನಡೆಯುವ ತೀರ್ಮಾನ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡಲು ನಾವೆಲ್ಲಾ ಒಂದಾಗುತ್ತಿದ್ದೇವೆ. ಈ ಬೆಳವಣಿಗೆ (ವಿಪಕ್ಷಗಳ ಸಭೆ) ಭಾರತದ ಗೇಮ್ ಚೇಂಜರ್ ಆಗಲಿದೆ. ಪಟ್ನಾ ಸಭೆ ಬಳಿಕೆ ಬಿಜೆಪಿಗೆ ಭಯ ಶುರುವಾಗಿದೆ. ಅವರು (ಎನ್ ಡಿಎ) ಕೂಡ ತಮ್ಮ ಮೈತ್ರಿ ಕೂಟದ ಸಭೆ ನಡೆಸುತ್ತಿದ್ದಾರೆ. ಈ ವಿಪಕ್ಷಗಳ ಒಕ್ಕೂಟ ಸಭೆಯ ಮುಂದಾಳತ್ವವನ್ನು ಕಾಂಗ್ರೆಸ್ ವಹಿಸಿಕೊಂಡಿದೆ ಎಂದು ಅವರು ಹೇಳಿದರು..