ಬೆಳಗಾವಿ: ದೇವಸ್ಥಾನಗಳಲ್ಲಿ ಪ್ರಸಾದ ತಯಾರಿ, ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಸಂಬಂಧಿಸಿದಂತೆ ನಾವು ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಮುಜರಾಯಿ ಸಚಿವ ರಾಜಶೇಖರ ಪಾಟೀಲ ಹೇಳಿದರು.
ಅದು 2012ರಲ್ಲಿ ಹೊರಡಿಸಿದ ಸುತ್ತೋಲೆ. ಆ ಸುತ್ತೋಲೆಯಲ್ಲಿ ದೇಗುಲದಲ್ಲಿ ಸಿಸಿಟಿವಿ ಅಳವಡಿಸುವುದು ಕಡ್ಡಾಯ ಎಂಬ ಅಂಶವಿದೆ. ಘಟನೆ ಮರುಕಳಿಸಬಾರದು ಎಂಬುದು ನಮ್ಮ ಬಯಕೆ. ಹೀಗಾಗಿ ಅದೇ ಸುತ್ತೋಲೆಯನ್ನು ನೆನಪಿಸಲಾಗಿದೆ ಎಂದರು.
ಸುಳ್ವಾಡಿ ಮಾರಮ್ಮ ದೇಗುಲವನ್ನು ಮುಜರಾಯಿ ವ್ಯಾಪ್ತಿಗೆ ಪಡೆಯುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವಸ್ಥಾನ ವಶಕ್ಕೆ ಪಡೆಯುವ ಬಗ್ಗೆ ಸಲಹೆ ಬಂದಿದೆ. ಸದನದಲ್ಲಿ ಕೆಲವು ಸದಸ್ಯರು ಸಲಹೆ ನೀಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಮೊದಲು ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಬೇಕು ಎಂದರು.