ಕೂಡಲಸಂಗಮ (ಬಾಗಲಕೋಟೆ): ‘ಸತ್ಯ ಹೇಳಲು ಧೈರ್ಯ ಬೇಕು. ಅಂತಹ ಧೈರ್ಯ ತೋರಿದ ಬಸವಣ್ಣನವರು ವಿಶ್ವಕ್ಕೆ ಬೆಳಕಾಗಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದರು.
ಕೂಡಲಸಂಗಮದಲ್ಲಿ ಭಾನುವಾರ ಬಸವ ಧರ್ಮ ಪೀಠದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸತ್ಯ ಹೇಳಿದ ಬಸವಣ್ಣ ಅವರ ಮೇಲೆ ಆಕ್ರಮಣವಾಯಿತು. ಬೆದರಿಸುವ ಕೆಲಸ ಆಯಿತು. ಅದಕ್ಕೆ ಹಿಂಜರಿಯಲಿಲ್ಲ. ಸಮಾಜ ಅವರನ್ನು ಹತ್ತು ಶತಮಾನಗಳ ನಂತರವೂ ಗೌರವ ಸಲ್ಲಿಸುತ್ತಿದೆ’ ಎಂದರು.
‘ಮೌಢ್ಯ, ಅಂಧಶ್ರದ್ಧೆಯ ಸಮಾಜದಲ್ಲಿ ಬಸವಣ್ಣ ಸಮಾನತೆಗಾಗಿ ಶ್ರಮಿಸಿದರು. ಹಿಂದೂಸ್ತಾನದ ಪ್ರಜಾಪ್ರಭುತ್ವ ವ್ಯವಸ್ಥೆಗೆ 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಸ್ಥಾಪಿಸಿ ಭದ್ರ ಬುನಾದಿ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.
ಬಸವಣ್ಣ ಅವರು ಹೋರಾಡಿದ ವಿಷಯಗಳಿಗಾಗಿ ಸ್ವಾಮೀಜಿಗಳೂ ಹೋರಾಟ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಗದಗದ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಅನುಭವ ಮಂಟಪದಲ್ಲಿ ಮಹಿಳೆಗೆ ಅವಕಾಶ ನೀಡುವ ಮೂಲಕ ಮಹಿಳೆಯರಿಗೆ ಮೊದಲ ಬಾರಿಗೆ ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ ಎಂದರು.
ಇಳಕಲ್ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ವಿಜಯಪುರದ ವನಶ್ರೀ ಮಠದ ಜಯಬಸವ ಕುಮಾರ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ, ಮಮದಾಪುರದ ವಿರಕ್ತಮಠದ ಅಭಿನವ ಮುರುಘೇಂದ್ರ ಸ್ವಾಮೀಜಿ, ಬಸವ ಧರ್ಮ ಪೀಠ ಮಹಾದೇಶ್ವರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದರು.
ವಿಭೂತಿ ಧರಿಸಿ ಬಂದ ರಾಹುಲ್ ಬಾಗಲಕೋಟೆ: ಬಸವ ಜಯಂತಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿಭೂತಿ ಧರಿಸಿ ವೇದಿಕೆ ಮೇಲೆ ಬಂದು ಗಮನ ಸೆಳೆದರು. ಸಂಗಮೇಶ್ವರ ಹಾಗೂ ಬಸವಣ್ಣ ಐಕ್ಯಸ್ಥಳಕ್ಕೆ ಭೇಟಿ ನೀಡುವಾಗಲೇ ವಿಭೂತಿ ಧರಿಸಿದ್ದರು. ಸಂಗಮೇಶ್ವರನಿಗೆ ಆರತಿ ಬೆಳಗಿ ಬಸವಣ್ಣನಿಗೆ ನಮನ ಸಲ್ಲಿಸಿದರು.
ಲಿಂಗಾಯತ ಮತದತ್ತ ಕಾಂಗ್ರೆಸ್ ಕಣ್ಣು ಬಾಗಲಕೋಟೆ: ಜಗದೀಶ ಶೆಟ್ಟರ್ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದೆ ಎಂಬ ಕೂಗಿನ ನಡುವೆಯೇ ಬಸವ ಜಯಂತಿಗೆ ರಾಹುಲ್ ಗಾಂಧಿ ಅವರನ್ನು ಕರೆಯಿಸುವ ಮೂಲಕ ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಕಳೆದ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಮೂಲಕ ಬಿಜೆಪಿಯ ಬುಟ್ಟಿಯಲ್ಲಿದ್ದ ಲಿಂಗಾಯತ ಮತ ಸೆಳೆಯಲು ಕಾಂಗ್ರೆಸ್ ಯತ್ನಿಸಿತ್ತು. ಈ ಬಾರಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರನ್ನು ಕರೆಯುವ ಮೂಲಕ ಮತ್ತೊಮ್ಮೆ ಯತ್ನಿಸಲು ಮುಂದಾಗಿದೆ. ಕಾರ್ಯಕ್ರಮವನ್ನು ಬಸವ ಧರ್ಮ ಪೀಠ ಆಯೋಜಿಸಿತ್ತಾದರೂ ಎರಡು ದಿನಗಳಿಂದ ಕಾಂಗ್ರೆಸ್ ಮುಖಂಡರೇ ಓಡಾಡುತ್ತಿದ್ದಾರೆ. ವೇದಿಕೆ ಮೇಲೆಯೂ ಕಾಂಗ್ರೆಸ್ ಮುಖಂಡರೇ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.