ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರವೂ ಮಳೆಯ ಆರ್ಭಟ ಮುಂದುವರಿಯಿತು.
ಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ, ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 20 ಸಾವಿರ ಕ್ಯುಸೆಕ್ಗೆ ಮುಟ್ಟಿದೆ. ಭಾಗಮಂಡಲ ಹೋಬಳಿ ವ್ಯಾಪ್ತಿಯ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಸಿದ್ದಾಪುರ ಭಾಗದಲ್ಲೂ ಕಾವೇರಿ ನದಿ ನೀರು ಹೆಚ್ಚಾಗಿದೆ.
ಬಿರುಗಾಳಿಗೆ ಮಡಿಕೇರಿ ನಗರ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿವೆ. ಅಬ್ಬಿಫಾಲ್ಸ್ ರಸ್ತೆಯಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ, ಸಂಚಾರ ದಟ್ಟಣೆ ಉಂಟಾಗಿತ್ತು.
ಮಡಿಕೇರಿಯ ಅರಣ್ಯ ಭವನದ ಸಮೀಪ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಇಡೀ ದಿನ ವಿದ್ಯುತ್ ಕಡಿತಗೊಂಡಿತ್ತು. ಹೈಸೋಡ್ಲೂರು - ಬಿರುನಾಣಿ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನಾಗನಹಳ್ಳಿ ಬಳಿ ಮಳೆಗಾಳಿಯಿಂದ ಶುಕ್ರವಾರ ರಾತ್ರಿ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬ, ಮರ ಬಿದ್ದು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಸಕಲೇಶಪುರ ತಾಲ್ಲೂಕಿನ ಕ್ಯಾನಹಳ್ಳಿಯ ಲಿ ಕೆ.ಬಿ.ಜಗದೀಶ್ ಅವರ ಮನೆ ತಡೆಗೋಡೆ ಮಳೆಯಿಂದ ಸಂಪೂರ್ಣ ಕೊಚ್ಚಿಹೋಗಿದ್ದು, ಇಡೀ ಮನೆ ಬೀಳುವ ಆತಂಕದಲ್ಲಿದೆ. ಕಾಫಿ ತೋಟದ ಮನೆಗೆ ಅವರೇ ನಿರ್ಮಿಸಿಕೊಂಡಿದ್ದ ಸುಮಾರು 80 ಅಡಿಗೂ ಉದ್ದದ ತಡೆಗೋಡೆ ಸಂಜೆ ಕುಸಿದಿದ್ದು, 50 ಅಡಿಗೂ ಹೆಚ್ಚು ಆಳಕ್ಕೆ ಬಿದ್ದಿದೆ. ಆ ಜಾಗಕ್ಕೆ ಮಳೆ ನೀರು ಬೀಳದಂತೆ ತಾತ್ಕಾಲಿಕವಾಗಿ ಟಾರ್ಪಾಲ್ ಹಾಕಿಕೊಂಡಿದ್ದಾರೆ.
ಹಾಸನ-ಸಕಲೇಶಪುರ ನಡುವಿನ ಬಾಗೆ ಸಮೀಪದ ರಾಟೆಮನೆಯಲ್ಲಿ ಇತ್ತೀಚೆಗಷ್ಟೇ ನಿರ್ಮಿಸಿದ್ದ ಹೆದ್ದಾರಿ ತಡೆಗೋಡೆ ಕುಸಿದಿದೆ. ದೋಣಿಗಾಲ್, ತೋಟದಮನೆ, ಆನೇಮಹಲ್ ಮಾರ್ಗದ ಉದ್ದಕ್ಕೂ ಹೆದ್ದಾರಿ ತಡೆಗೋಡೆಗಳು ನಾಲ್ಕೇ ದಿನದ ಮಳೆಗೆ ಬಿದ್ದು ಹೋಗಿವೆ.
ಭಾರಿ ಗಾಳಿ ಬೀಸಿದ್ದರಿಂದ ಮಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು, ಕೆಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ನೇರಳೆಕಟ್ಟೆಯಲ್ಲಿ ರಸ್ತೆಗೆ ಮರ ಉರುಳಿ ಬಿದ್ದು ಮಾಣಿ– ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನಗಳ ಸಂಚಾರಕ್ಕೆ ಕೆಲ ಕಾಲ ಅಡ್ಡಿ ಉಂಟಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಕೆಲ ಮನೆಗಳ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿವೆ.
ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಲ ಕಡೆ ದಿನವಿಡೀ ತುಂತುರು ಇದ್ದರೆ, ಇನ್ನೂ ಕೆಲ ಕಡೆ ಬಿರುಸಿನ ಮಳೆ ಸುರಿಯಿತು.
ಖಾನಾಪುರ ತಾಲ್ಲೂಕಿನಲ್ಲಿ ಇಡೀ ದಿನ ಧಾರಾಕಾರ ಮಳೆಯಾದ ಕಾರಣ ಕಾಡಂಚಿನ 14 ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಪರಿಸ್ಥಿತಿ ಯಥಾರೀತಿಯಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದ ಕೃಷ್ಣಾ ನದಿಗೆ 92 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ, ಹಳಿಯಾಳ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಜೊಯಿಡಾದ ಮೆಸ್ತಬಿರೋಡಾ ಗ್ರಾಮದಲ್ಲಿ ಬೃಹತ್ ಮರ ಉರುಳಿ ಮನೆಗೆ ಹಾನಿಯಾಗಿದೆ. ಯಲ್ಲಾಪುರದ ನಂದಿಬಾವಿಯಲ್ಲಿ ಮನೆಯೊಂದರೆ ಗೋಡೆ ಕುಸಿದಿದೆ.
ಇಡಗುಂದಿ ವಲಯ ಅರಣ್ಯ ವ್ಯಾಪ್ತಿಯ ಶಿರ್ಲೆ ಜಲಪಾತಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ದಾಂಡೇಲಿಯ ಕುಳಗಿ ರಸ್ತೆಯ ಬಡಕಾನಶಿರಡಾ ಗ್ರಾಮದ ಕ್ರಾಸ್ ಬಳಿ ಮರ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು.
ಕಾಳಿನದಿಯಲ್ಲಿ ನೀರಿನ ಹರಿವಿನ ಮಟ್ಟ ಏರಿಕೆಯಾದ ಪರಿಣಾಮ ತಾಲ್ಲೂಕಿನ ಕದ್ರಾ ಜಲಾಶಯದಿಂದ 6 ಕ್ರಸ್ಟ್ ಗೇಟ್ಗಳಿಂದ 30 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಯಿತು.
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನಲ್ಲಿ ಸತತ ಮಳೆಯಿಂದಾಗಿ ಉಡಬನಹಳ್ಳಿ–ಕರಕನಳ್ಳಿ ಗ್ರಾಮಗಳ ಮಧ್ಯೆ ರಸ್ತೆ ಮೇಲೆ ನೀರು ನಿಂತಿದ್ದರಿಂದ ಸಂಪರ್ಕ ಕಡಿತಗೊಂಡಿದೆ. ಕಮಲನಗರ–ಔರಾದ್ ಸಂಪರ್ಕ ಕಲ್ಪಿಸುವ ಖತಗಾಂವ ಕ್ರಾಸ್ ಸಮೀಪದ ಸೇತುವೆ ಜಲಾವೃತವಾಗಿದ್ದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಳೆ ಚುರುಕಾಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಲಕ್ಕವಳ್ಳಿಯ ಭದ್ರಾ ಜಲಾಶಯ ಒಳಹರಿವು ಏರಿಕೆಯಾಗಿದೆ. ಸಾಗರದಲ್ಲಿ ಮಳೆ ಹೆಚ್ಚಾಗಿದ್ದು, ಮರಗಳು ಧರೆಗುರುಳಿವೆ. ಕಾರ್ಗಲ್ ಬಳಿಯ ಮಾವಿನಗುಂಡಿ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಮರಬಿದ್ದು ಚಿಕ್ಕಮಗಳೂರು ಜಿಲ್ಲೆಯ ಸುಂಕಸಾಲೆ ಗ್ರಾಮದ ಸಂಪಿಗೇಕಾನು ನಿವಾಸಿ ಶಂಕರ ಗೌಡ (42) ಗಾಯಗೊಂಡಿದ್ದಾರೆ. ದಾವಣಗೆರೆ ನಗರ, ಸುತ್ತಮುತ್ತ ಹಾಗೂ ಚಿತ್ರದುರ್ಗ ನಗರದಲ್ಲೂ ಮಳೆಯಾಗಿದೆ.
ನೀರಿನ ಹೊಂಡಕ್ಕೆ ಬಿದ್ದು ರೈತ ಸಾವು
ಭಟ್ಕಳ (ಉತ್ತರ ಕನ್ನಡ): ತಾಲ್ಲೂಕಿನ ಮಾರುಕೇರಿಯಲ್ಲಿ ಶನಿವಾರ ಮನೆಯಿಂದ ತೋಟಕ್ಕೆ ತೆರಳುತ್ತಿದ್ದ ರೈತ ಕೃಷ್ಣ ನಾಗಪ್ಪ ಗೊಂಡ (55) ಎಂಬುವರು ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಸತತ ಮಳೆಯಿಂದ ಕಾಲುದಾರಿಯ ಪಕ್ಕದಲ್ಲಿದ್ದ ಹೊಂಡ ಭರ್ತಿಯಾಗಿತ್ತು. ಕೆಸರಿನಿಂದ ಕೂಡಿದ್ದ ದಾರಿಯಲ್ಲಿ ಕೃಷ್ಣ ಅವರು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.