ಸಂಬಂಧಿಕರ ಮನೆಯ ಮದುವೆಗೆಂದು ಮೂರ್ನಾಲ್ಕು ದಿನ ಹೋಗಿ ವಾಪಸ್ ಬಂದ ಶಂಕ್ರಿ ಕುಟುಂಬಕ್ಕೆ ಆಘಾತ ಕಾದಿತ್ತು. ಶಾಕ್ ಆಗಲಿ ಅಂತಲೇ ಯಾರೋ ಮನೆ ಕಾಂಪೌಂಡ್ ಮೇಲೆ, ‘ಮತದಾನ ಮಾಡದ ನೀವು ನಾಲಾಯಕ್ ನಾಗರಿಕರು, ಮತಹೀನರು. ನಿಮಗೆ ಧಿಕ್ಕಾರ...’ ಎಂಬ ಪೋಸ್ಟರ್ ಅಂಟಿಸಿದ್ದರು.
‘ಪೋಸ್ಟರ್ ಅಂಟಿಸಿದವರ ವಿರುದ್ಧ ಆಯೋಗಕ್ಕೆ ದೂರು ಕೊಡಿ’ ಅಂದಳು ಸುಮಿ.
‘ಬೇಡ, ನಾವು ವೋಟ್ ಮಾಡಿಲ್ಲ ಅಂತ ಚುನಾವಣಾ ಆಯೋಗ ನಮಗೇ ಛೀಮಾರಿ ಹಾಕಬಹುದು’ ಶಂಕ್ರಿ ಹೆದರಿಸಿದ.
‘ಪೋಲಿಂಗ್ ದಿನ ಆಫೀಸಿಗೆ ರಜೆ ಅಂತ ಫ್ಯಾಮಿಲಿ ಸಮೇತ ಟೂರ್ ಹೋಗಿದ್ವಿ, ನಮ್ಮ ಕಾಂಪೌಂಡ್ ಮೇಲೂ ಇಂಥದ್ದೇ ಪೋಸ್ಟರ್ ಅಂಟಿಸಿದ್ದರು ಕಣ್ರೀ’ ಎಂದು ಬಂದ ಒಬ್ಬ.
‘ಮತದಾನದ ಮಹತ್ವ ಗೊತ್ತೇನ್ರೀ ನಿಮಗೆ? ನಿಮ್ಮಂತಹ ಮತಭ್ರಮಣೆ, ಮತಹೀನ ಮನಃಸ್ಥಿತಿ ಯವರಿಂದಲೇ ಪೋಲಿಂಗ್ ಪರ್ಸೆಂಟೇಜ್ ಕಮ್ಮಿಯಾಗ್ತಿರೋದು’ ಮತ್ತೊಬ್ಬ ಬಂದು ರೇಗಿದ.
‘ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯ ನಡೆಯುವ ಶುಭದಿನವೇ ಮತದಾನಕ್ಕೆ ದಿನ ನಿಗದಿ ಮಾಡಿದ್ರೆ ನಾವೇನು ಮಾಡೋಣ?’ ಸುಮಿನೂ ರೇಗಿದಳು.
‘ಶುಭ ಕಾರ್ಯಗಳಿಲ್ಲದ ಅಮಾವಾಸ್ಯೆ, ಆಷಾಢದಲ್ಲಿ ಎಲೆಕ್ಷನ್ ಡೇಟ್ ಫಿಕ್ಸ್ ಮಾಡಿದ್ರೆ ನಾವೂ ವೋಟ್ ಮಾಡಬಹುದಿತ್ತು’ ಶಂಕ್ರಿ ಹೇಳಿದ.
‘ಶುಭ ಮುಹೂರ್ತದಲ್ಲಿ ಮತದಾನ ಮಾಡಿದ್ರೆ ಸುಭದ್ರ ಸರ್ಕಾರ ರಚನೆ ಆಗುತ್ತೆ ಅಂತ ಚುನಾವಣಾ ಆಯೋಗದವರು ಜ್ಯೋತಿಷ ಕೇಳಿ ಮತದಾನಕ್ಕೆ ಶುಭ ದಿನ ಫಿಕ್ಸ್ ಮಾಡಿದ್ರೇನೋ’ ಎಂದ ಇನ್ನೊಬ್ಬ.
‘ಆ್ಯನ್ಯುಯಲ್ ಎಕ್ಸಾಂನಲ್ಲಿ ಫೇಲಾದವರಿಗೆ ಸಪ್ಲಿಮೆಂಟರಿ ಬರೆಯಲು ಅವಕಾಶವಿರುವಂತೆ,
ಪೋಲಿಂಗ್ ದಿನ ವೋಟ್ ಮಾಡದವರಿಗೆ ಬೇರೊಂದು ದಿನ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು’ ಅಂದ ಶಂಕ್ರಿ.
‘ಛೇ!... ನಿಮ್ಮಂಥಾ ಸಪ್ಲಿಮೆಂಟಾಲಿಟಿ ಜನ ಇರೋವರೆಗೂ ದೇಶದ ಪರಿಸ್ಥಿತಿ
ಬದಲಾಗೋದಿಲ್ಲ...’ ಬಂದಿದ್ದವರು ರೇಗಾಡಿ ಕೊಂಡು ಹೋದರು.