ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಯಿಂಗ್ ವಿವಾದ; ವಾಹನ ನಿಲುಗಡೆ ವ್ಯವಸ್ಥೆ ಸುಧಾರಣೆಗೆ ಕ್ರಮ ಅಗತ್ಯ- ಸದಾನಂದಗೌಡ

Last Updated 2 ಫೆಬ್ರುವರಿ 2022, 10:47 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ವಾಹನಗಳ ಟೋಯಿಂಗ್ ವ್ಯವಸ್ಥೆಯ ಬಗ್ಗೆ ತೀವ್ರ ಚರ್ಚೆ ಆಗುತ್ತಿದ್ದು, ಸರ್ಕಾರ ವಾಹನ ದಟ್ಟಣೆ ನಿಯಂತ್ರಣಕ್ಕೆ‌ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಡಿ.ವಿ. ಸದಾನಂದಗೌಡ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಅವರು, ಅಸಮರ್ಪಕ ನಿರ್ವಹಣೆಯಿಂದಾಗಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಹೆಬ್ಬಾಳ ಫ್ಲೈ ಓವರ್ ನಿಂದ ವಿಮಾನ ನಿಲ್ದಾಣ ತಲುಪಲು 20 ನಿಮಿಷದ ಬದಲಿಗೆ, ಒಂದು ಗಂಟೆಗೂ ಅಧಿಕ ಸಮಯ ವ್ಯಯವಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಜನರು ಮನಬಂದಂತೆ ವಾಹನ ನಿಲುಗಡೆ ಮಾಡುತ್ತಿರುವುದರಿಂದ ದಟ್ಟಣೆ ಕಂಡುಬರುತ್ತಿದೆ ಎಂದು ಅವರು ದೂರಿದರು.

ರಾಜ್ಯ ಸರ್ಕಾರವುಭ್ರಷ್ಟಾಚಾರ ನಿಯಂತ್ರಣಕ್ಕೆ ಆರಂಭಿಸಿರುವ ಸಕಾಲ ಯೋಜನೆಯನ್ನು ಸಮರ್ಪಕವಾಗಿ ಬಳಸುವ ಅಗತ್ಯವಿದೆ. ಈ ಮೂಲಕ ಜನರ ಮನೆಬಾಗಿಲಿಗೇ ಸೌಲಭ್ಯ ತಲುಪಿಸಿದಲ್ಲಿ ವಾಹನ ದಟ್ಟಣೆ ಕಡಿಮೆ‌ ಮಾಡಬಹುದು ಎಂದೂ ಅವರು ಅಭಿಪ್ರಾಯಪಟ್ಟರು.

'ಸಕಾಲ ಯೋಜನೆಯ ಸಮರ್ಪಕ ಜಾರಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ'ಎಂದ ಅವರು, ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ದೊರೆತಿದ್ದರೂ ಇದುವರೆಗೆ ಭರವಸೆ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಾಹನ‌ಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಟೋಯಿಂಗ್ ಮಾಡಲಾಗುತ್ತದೆ. ಇದರಲ್ಲಿ ಖಂಡಿತ ಪೊಲೀಸರ ತಪ್ಪಿಲ್ಲ ಎಂದು ಅವರು ಹೇಳಿದರು.

ಆಯಾ ಮನೆಗಳ ನಿರ್ಮಾಣಕ್ಕೆ ಪರವಾನಗಿ ನೀಡುವಾಗಲೇ ವಾಹನಗಳ ಸಮರ್ಪಕ ಪಾರ್ಕಿಂಗ್ ಬಗ್ಗೆ ಸೂಚಿಸಬೇಕು. ಸಾರ್ವಜನಿಕರು ತಮ್ಮ ಮನೆ‌ಗಳ ಮುಂದಿನ ರಸ್ತೆಯ ಮೇಲೆ ವಾಹನ ನಿಲುಗಡೆ ಮಾಡುವುದರಿಂದಲೂ ಅವ್ಯವಸ್ತೆ ಉಂಟಾಗುತ್ತಿದೆ ಎಂದು ಅವರು ದೂರಿದರು.

ಪ್ರತಿ ಮನೆಗೆ ಎರಡು ಅಥವಾ ಮೂರು ವಾಹನಗಳು ಇರುವುದರಿಂದ ಅವುಗಳನ್ನು ನಿಲ್ಲಿಸಲು ಜಾಗವಿಲ್ಲದೆ, ರಸ್ತೆ ಮೇಲೆ ನಿಲುಗಡೆ ಮಾಡಿ ಸಮಸ್ಯೆಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಜನರು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಅವಲಂಬನೆಗೆ ಮುಂದಾಗದಿರುವುದೂ ಇದಕ್ಕೆ‌ ಪ್ರಮುಖ ಕಾರಣ. ಮನಸೋ‌ ಇಚ್ಛೆ ವಾಹನ ನಿಲ್ಲಿಸುವುದರ ವಿರುದ್ಧ ಸರ್ಕಾರ ಗಂಭೀರ ಕ್ರಮ‌ ಕೈಗೊಳ್ಳಲು ಮುಖ್ಯಮಂತ್ರಿಯವರು ಸೂಚಿಸಬೇಕು ಎಂದು ಅವರು ಕೋರಿದರು.

ಅಲ್ಲಲ್ಲಿ ವಾಹನ‌ ಪಾರ್ಕಿಂಗ್ ಗೆ ಅಗತ್ಯ ವ್ಯವಸ್ಥೆ ಇದ್ದರೂ ಜನರು ಅದನ್ನು ಬಳಕೆ ಮಾಡದೇ‌ ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಾರೆ. ಇದನ್ನು ತಡೆಯಲು ಪೊಲೀಸರು ಅನಿವಾರ್ಯವಾಗಿ ಕ್ರಮ ಕೈಗೊಳ್ಳುತ್ತಾರೆ. ಹಾಗಾಗಿ, ಜನರೇ ಅವ್ಯವಸ್ಥೆ ಕೈಬಿಡಬೇಕು. ಸರ್ಕಾರವೂ ಜನರನ್ನು ಓಲೈಸುವ ಕೆಲಸ ಮಾಡದೇ, ಕಟ್ಟುನಿಟ್ಟಿನ ಕ್ರಮಕ್ಕೆ‌ ಮುಂದಾಗಬೇಕಿದೆ ಎಂದು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಸದಸ್ಯರಾಗಿರುವ ಸದಾನಂದಗೌಡ ಮನವಿ ಮಾಡಿದರು.

ಈ ಕುರಿತು ತಜ್ಣರು, ಸಾರ್ವಜನಿಕರ‌ ಅಭಿಪ್ರಾಯ ಸಂಗ್ರಹಿಸಿ, ಸೂಕ್ತ ನಿಯಮ ರೂಪಿಸಬೇಕು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ಇರುತ್ತಾರೆ. ಆದರೆ, ಅವರನ್ನೇ ದೂಷಿಸಿ ಕೆಲಸದಿಂದ ಅಮಾನತು ಮಾಡುವಂತೆ ಆಗ್ರಹಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

ಕಸ‌ ವಿಲೇವಾರಿ ಕುರಿತೂ ಸರ್ಕಾರ‌ ಸೂಕ್ತ ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ಆಯಾ ವಾರ್ಡ್ ಮಟ್ಟದಲ್ಲೇ ಆಗುವಂತೆ ಹಾಗೂ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಣೆ ಮಾಡುವ ವ್ಯವಸ್ಥೆಯೂ ಮೂಲದಲ್ಲೇ‌‌ ಆಗುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT