ಬೆಂಗಳೂರು: ಕಾವೇರಿ ನೀರಿನ ಸಮಸ್ಯೆ ಬಗೆಹರಿಯಬೇಕೆಂದರೆ ಕಾವೇರಿ ನದಿ ಕೊಳ್ಳದಲ್ಲಿ ವ್ಯಾಪಕ ಗಿಡ–ಮರಗಳನ್ನು ಬೆಳೆಯಬೇಕು ಎಂದು ಇಶಾ ಫೌಂಡೇಶನ್ನ ಸದ್ಗುರು ಜಗ್ಗಿ ವಾಸುದೇವ ಅವರು ಕರೆ ನೀಡಿದ್ದಾರೆ.
ಈ ಕುರಿತು X ತಾಣದಲ್ಲಿ ಬರೆದುಕೊಂಡಿರುವ ಅವರು, ‘ತಾಯಿ ಕಾವೇರಿಗೆ ನಾವು ಯಾವ ರಾಜ್ಯದವರೆಂದು ಗೊತ್ತಿಲ್ಲ. ಬೇಸಿಗೆಯಲ್ಲಿ ಹರಿಯುವುದನ್ನು ನಿಲ್ಲಿಸಿ ಬತ್ತಿ ಹೋಗುವುವಳು. ಕಾವೇರಿ ಕೊಳ್ಳದ ಸುಮಾರು 83,000 ಚಕಿಮೀ ವ್ಯಾಪ್ತಿಯ ಭೂಮಿಯಲ್ಲಿ ಮರ–ಗಿಡಗಳನ್ನು ಬೆಳೆಸುತ್ತಾ ಕೃಷಿ ಮಾಡುವುದೇ ಕಾವೇರಿ ನೀರಿನ ಸಮಸ್ಯೆಗೆ ಪರಿಹಾರ. ಇದರಿಂದ ಮಾತ್ರ ಕಾವೇರಿ ವರ್ಷಪೂರ್ತಿ ತುಂಬಿ ಹರಿಯುವಳು’ ಎಂದು ಸಲಹೆ ನೀಡಿದ್ದಾರೆ.
‘ಪ್ರಸ್ತುತ ಕಾವೇರಿ ನೀರಿನ ಜ್ವಲಂತ ಸಮಸ್ಯೆಗೆ ಇದುವೇ ಪರಿಹಾರವಾಗಬಹುದು. ಬದಲಿಗೆ ಹೋರಾಟಗಳಿಂದ ಪ್ರಯೋಜನ ಇಲ್ಲ’ ಎಂದು ಹೇಳಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಸೆ.29 ರಂದು ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಿದ್ದವು. ಇಂದು ಕೂಡ ಅಲ್ಲಲ್ಲಿ ಹೋರಾಟಗಳು ನಡೆದಿವೆ.