ಮೋಳೆ (ಬೆಳಗಾವಿ ಜಿಲ್ಲೆ): ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ತಮ್ಮನ್ನು ಹಲವು ದಿನಗಳ ನಂತರ ಭೇಟಿಯಾಗಲು ಸೋಮವಾರ ರಾತ್ರಿ ಬಂದ ‘ಶಾಸಕ ಸ್ಥಾನದಿಂದ ಅನರ್ಹವಾಗಿರುವ’ ಶ್ರೀಮಂತ ಪಾಟೀಲ ಅವರನ್ನು ಕಾಗವಾಡ ತಾಲ್ಲೂಕಿನ ಉಗಾರ ಬದ್ರುಕ್ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರು ತರಾಟೆಗೆ ತೆಗೆದುಕೊಂಡರು.
ಇದರಿಂದ ಬೇಸರಗೊಂಡ ಪಾಟೀಲ ಅಲ್ಲಿಂದ ತೆರಳಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.
‘ಪ್ರವಾಹದಿಂದ ಆಸ್ತಿ–ಪಾಸ್ತಿ ಕಳೆದುಕೊಂಡು ಅತಂತ್ರರಾಗಿದ್ದೇವೆ. ನಮಗೆ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಯಾರೂ ಕೇಳುವವರಿಲ್ಲ. ಇಷ್ಟು ದಿನ ಬಾರದವರು ಈಗೇಕೆ ಬಂದಿದ್ದೀರಿ?’ ಎಂದು ಬಿಸಿ ಮುಟ್ಟಿಸಿದ್ದಾರೆ.
‘ಶಾಸಕರಾಗಿದ್ದಾಗಲೇ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡಲಿಲ್ಲ. ಅನರ್ಹರಾಗಿರುವ ನೀವು ಯಾವ ಪರಿಹಾರ ಕೊಡಿಸುತ್ತೀರಿ, ನಿಮ್ಮನ್ನು ನಂಬುವುದು ಹೇಗೆ?’ ಎಂದು ಕೇಳಿದ್ದಾರೆ.
ಕೃಷ್ಣಾ ಕಿತ್ತೂರ, ಕಾಗವಾಡ, ಶೇಡಬಾಳ ಹಾಗೂ ಉಗಾರ ಗ್ರಾಮದವರೂ ಇದೇ ರೀತಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.