ಮೈಸೂರು: ಕೋವಿಡ್ ನಿರ್ವಹಣೆ ಯಲ್ಲಿ ವಿರೋಧ ಪಕ್ಷದವರು ಸಹಕಾರ ನೀಡುತ್ತಿಲ್ಲವೆಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಕೊರೊನಾ ಸಂಕಷ್ಟದ ಕಾಲದಲ್ಲಿ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಅವರು ಮಾಡಿದ್ದೇನು?’ ಎಂದು ಗುರುವಾರ ಇಲ್ಲಿ ಹರಿಹಾಯ್ದರು.
‘ಆ ರಾಜ್ಯಗಳಲ್ಲಿ ಇವರು ಸರ್ಕಾರಕ್ಕೆ ಯಾವ ರೀತಿ ಸಹಕಾರ ನೀಡಿದ್ದಾರೆ? ಮಧ್ಯಪ್ರದೇಶದಲ್ಲಿ ಸರ್ಕಾರವನ್ನು ಕಿತ್ತು ಹಾಕಿದ್ದು ಸಹಕಾರವೇ, ರಾಜಸ್ಥಾನದಲ್ಲಿ ಗೆಹ್ಲೋಟ್ ಸರ್ಕಾರ ಪತನಕ್ಕೆ ಮುಂದಾ ಗಿರುವುದು ಸಹಕಾರವೇ, ಏನಿದೆ ಇವರಿಗೆ ನೈತಿಕತೆ’ ಎಂದರು.
‘ರೋಗ ನಿರ್ಮೂಲನೆಗೆ ಸಹಕಾರ ಕೊಡುತ್ತೇವೆ. ಆದರೆ, ಅಕ್ರಮವನ್ನು ಸಹಿಸುವುದಿಲ್ಲ’ ಎಂದ ಅವರು, ಭ್ರಷ್ಟಾಚಾರದ ದಾಖಲೆ ಸಿಕ್ಕಿದ್ದಕ್ಕಾಗಿಯೇ ಅಲ್ಲವೆ ಪ್ರಶ್ನೆ ಮಾಡುತ್ತಿರುವುದು. ಕೋವಿಡ್ ನಿಯಂತ್ರಿಸುವಲ್ಲಿ ಮಹಾ ರಾಷ್ಟ್ರ, ದೆಹಲಿ ಯಶಸ್ವಿಯಾಗಿದ್ದು, ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.
‘ಬಿಜೆಪಿ ಪರ ಮೃದು ಧೋರಣೆ: ತಪ್ಪು ಸಂದೇಶ ರವಾನೆ’
ಹುಬ್ಬಳ್ಳಿ: ‘ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದರೂ ಜೆಡಿಎಸ್ ಟೀಕೆ ಮಾಡದಿರುವುದಕ್ಕೆ ಜನರಲ್ಲಿ ತಪ್ಪು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಿಜೆಪಿ ಪರವಾಗಿ ಮೃದು ಧೋರಣೆ ತೋರುತ್ತಿದೆ ಎನ್ನುವ ಸಂದೇಶ ರವಾನೆಯಾಗುತ್ತಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಗುರುವಾರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಅವರು, ‘ಕುಮಾರ ಸ್ವಾಮಿ ಹಾಗೂ ದೇವೇಗೌಡರು ಮುಖಂಡರ ಸಭೆ ಕರೆದು ತಮ್ಮ ಸ್ಪಷ್ಟ ನಿಲುವು ಏನೆಂದು ತಿಳಿಸಲಿ’ ಎಂದರು.