ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಫೆಬ್ರುವರಿ 16ರಂದು ಮಂಡನೆಯಾಗಲಿದೆ.
ಫೆಬ್ರುವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಂಭವ ಇದೆ. ಹೀಗಾಗಿ, ಫೆಬ್ರುವರಿಯಲ್ಲೇ ಬಜೆಟ್ ಮಂಡನೆಯಾಗಲಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಜುಲೈನಲ್ಲಿ ಪರಿಷ್ಕೃತ ಬಜೆಟ್ ಮಂಡಿಸಿದ್ದ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಂಟು ತಿಂಗಳಿಗೆ ಅನುಮೋದನೆ ಪಡೆದಿದ್ದರು. ಈ ಬಾರಿ ಪೂರ್ಣಾವಧಿ ಬಜೆಟ್ ಮಂಡನೆಯಾಗಲಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಫೆ.12ರಿಂದ 23ರವರೆಗೆ ವಿಧಾನಮಂಡಲ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಮೊದಲ ದಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಭಾಷಣ ಮಾಡಲಿದ್ದಾರೆ.