ರಟ್ಟೆ ಗಟ್ಟಿಯಾಗಬೇಕು...
‘ಊಟದಲ್ಲೇನಿಷ್ಟ?’ ಅಜ್ಜಿಯ ಮುಂದೆ ಈ ಪ್ರಶ್ನೆ ಇಟ್ಟಾಗ ಅವರ ಕೊಟ್ಟ ಉತ್ತರ ಏನಾಗಿತ್ತು ಗೊತ್ತೆ? ಇಷ್ಟ, ಕಷ್ಟ ಅಂತನ್ನಬಾರದು ಮಗ.. ರಟ್ಟೆಗೆ ಕಸುವು ಕೊಡುವುದೇನಾದರೂ ಉಣ್ಣಬೇಕು. ಬೀಜವೊಂದು ಅನ್ನವಾಗೂದು, ಜೀವವೊಂದು (ಮೀನು, ಕೋಳಿ) ಆಹಾರ ಆಗೂದು ಸುಮ್ನಲ್ಲ. ಹೊಟ್ಟೆ ತುಂಬಬೇಕು. ರಟ್ಟೆ ಗಟ್ಟಿಯಾಗಬೇಕು. ಅಂಥದ್ದೇನಾದರೂ ಅದೀತು. ಜೀವಕ್ಕೆ ಬೇಕಿರುವಷ್ಟು ಉಣ್ಣಬೇಕು. ಜೀವನಕ್ಕೆ ಬೇಕಿರುವಷ್ಟು ಗಳಿಸಬೇಕು. ಯಾವುದು ಹೆಚ್ಚಾದರೂ ಮನಷಂಗೆ ಸೊಕ್ಕು ಬರ್ತದ. ನಾನು ಮೀನೂ ಉಣ್ತೀನಿ, ಗಂಜಿನೂ ಉಣ್ತೀನಿ. ಏನಿದ್ರೂ ಉಣ್ತೀನಿ. ಋಣ ತೀರಿದರೆ ಊಟ ಎಲ್ಲಿ? ನೀರೆಲ್ಲಿ? ತುಳಸಿ ಗೌಡ ಅವರ ಬದುಕಿನ ಸೂತ್ರ ಇದಾಗಿತ್ತು. ಸಮಾಧಾನದ ಮಂತ್ರವೂ ಇದೇ ಆಗಿತ್ತು.