ಮೈಸೂರು: ‘ಮುಸ್ಲಿಂ ಸಮುದಾಯದ ನಾಯಕತ್ವ ವಹಿಸುವ ಸಾಮರ್ಥ್ಯ ಸಚಿವ ಜಮೀರ್ ಅಹಮದ್ ಖಾನ್ಗೆ ಇಲ್ಲ’ ಎಂದು ಶಾಸಕ ತನ್ವೀರ್ ಸೇಠ್ ಇಲ್ಲಿ ಬುಧವಾರ ಪುನರುಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ಕಾರದ ಪ್ರತಿನಿಧಿಯಾಗಿ ಸಮುದಾಯಕ್ಕೆ ತಲುಪಿಸಬೇಕಾದ ಯೋಜನೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಅವರಿಗೆ ಅರ್ಹತೆ, ಶಕ್ತಿ ಇಲ್ಲ’ ಎಂದರು.
‘ಸಚಿವನಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಜಮೀರ್ ಶಕ್ತಿ ಪ್ರದರ್ಶನಕ್ಕೆ ಇಳಿಯಬಾರದು. ಅವರು ನೀಡಿರುವ ಸವಾಲು ನನಗೆ ದೊಡ್ಡ ವಿಷಯ ಅಲ್ಲ. ಆದರೆ, ನಾನು ಮಾಧ್ಯಮಗಳ ಮುಂದೆ ಅವರೊಂದಿಗೆ ಸಂಘರ್ಷಕ್ಕೆ ಇಳಿಯುವುದಿಲ್ಲ’ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ವೇಳೆ ನರಸಿಂಹರಾಜ ಕ್ಷೇತ್ರದಲ್ಲಿ ಅವರು ನನ್ನ ವಿರುದ್ಧ ಕೆಲಸ ಮಾಡಿದ್ದರು ಎಂದು ಆರೋಪಿಸಿದರು.