ಬೆಂಗಳೂರು: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿರುವ ಸಹಸ್ರಾರು ಸಾಹಿತ್ಯ ಪ್ರೇಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ‘ಆಪತ್ತು ನಿರ್ವಹಣಾ ಕೇಂದ್ರ’ವನ್ನು ಸಮ್ಮೇಳನದ ಪ್ರಧಾನ ವೇದಿಕೆಯ ಪಕ್ಕದಲ್ಲಿ ತೆರೆಯಲಾಗಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತ ಜಂಟಿಯಾಗಿ ಈ ಆಪತ್ತು ನಿರ್ವಹಣಾ ಕೇಂದ್ರವನ್ನು ತೆರೆದಿವೆ.
‘ಪ್ರಜಾವಾಣಿ’ಯ ಜೊತೆ ಮಾತನಾಡಿದ ಕೇಂದ್ರದ ಡಾ. ವಿಜಯ್ ಕುಮಾರ್ ಎಸ್. ಬಿರಾದಾರ ಅವರು, ‘ಇಲ್ಲಿ ಒಟ್ಟು 80 ಮಂದಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವವರಿಗೆ ಯಾವುದೇ ರೀತಿಯಲ್ಲಿ ಆರೋಗ್ಯ ಸಂಬಂಧಿ ತೊಂದರೆ ಕಂಡು ಬಂದರೆ, ಅವರಿಗೆ ಇಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅಗತ್ಯ ಬಂದರೆ ಸೂಕ್ತವಾದ ಆಸ್ಪತ್ರೆಗೆ ಕಳುಹಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಒಟ್ಟು 10 ಆಂಬುಲೆನ್ಸ್ಗಳು ನಮ್ಮ ಕೇಂದ್ರದಲ್ಲಿವೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕೇಂದ್ರ ತೆರೆದಿರುತ್ತದೆ. 10 ಮಂದಿ ಮಹಿಳಾ ವೈದ್ಯರೂ ಇಲ್ಲಿದ್ದಾರೆ. 40ಕ್ಕೂ ಅಧಿಕ ಮಂದಿ ಮೊದಲ ದಿನ ಇದರ ಪ್ರಯೋಜನ ಪಡೆದಿದ್ದಾರೆ’ ಎಂದರು.