ದಾವಣಗೆರೆ: ರಾಜ್ಯದಲ್ಲಿ ‘ಸಾಕ್ಷರತಾ ಸಪ್ತಾಹ’, ‘ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ'ಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆದರೆ, ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಅನಕ್ಷರತೆ ನಿವಾರಣೆಗೆ ಸರ್ಕಾರ ಸ್ಥಾಪಿಸಿರುವ 2300 ‘ಸಾಕ್ಷರತಾ ಕಲಿಕಾ ಕೇಂದ್ರಗಳು' ಸಾಕ್ಷರತಾ ದಿನಾಚರಣೆಯನ್ನು ಅಣಕಿಸುವಂತೆ ಕದಮುಚ್ಚಿವೆ!
ಡಾ.ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ರಾಜ್ಯ ಸರ್ಕಾರ ಧಾರವಾಡ, ದಾವಣಗೆರೆ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳನ್ನು ಸಾಕ್ಷರತೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳೆಂದು ಘೋಷಿಸಿತ್ತು. ಈ ಆರು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಮೀಕ್ಷಾ ಕಾರ್ಯ ಕೈಗೊಳ್ಳುವ ಮೂಲಕ ಸುಮಾರು 23 ಸಾವಿರ ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಇವರಲ್ಲಿ ಸುಮಾರು 18 ಸಾವಿರ ಮಹಿಳೆಯರು ಇದ್ದಾರೆ.
ಅವರನ್ನು ಅಕ್ಷರಸ್ಥರನ್ನಾಗಿಸುವ ಉದ್ದೇಶದಿಂದ ಸರ್ಕಾರ 2,300 ಸಾಕ್ಷರತಾ ಕಲಿಕಾ ಕೇಂದ್ರಗಳನ್ನು ತೆರೆಯುವ ಮೂಲಕ ಆಯವ್ಯಯದಲ್ಲಿ ರೂ. 45ಲಕ್ಷ ಅನುದಾನ ಮೀಸಲಿಟ್ಟಿತು. ಕಲಿಕಾ ಕೇಂದ್ರದಲ್ಲಿ ಕಲಿಕಾರ್ಥಿಗಳ ಅಕ್ಷರ ತರಬೇತಿಗಾಗಿ ಪ್ರತಿ 10 ಕಲಿಕಾರ್ಥಿಗಳಿಗೆ ಒಬ್ಬರಂತೆ 2,300 ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಸರ್ಕಾರ ನಿಗದಿಗೊಳಿಸಿದ್ದ ರೂ. 45 ಲಕ್ಷ ಅನುದಾನದಲ್ಲಿ ಇದುವರೆಗೆ ಬಿಡಿಗಾಸೂ ಮಂಜೂರಾಗಿಲ್ಲ.
ಹೀಗಾಗಿ ಗೌರವಧನವಿಲ್ಲದೇ ಸ್ವಯಂ ಸೇವಕರು ಆಸಕ್ತಿ ಕಳೆದುಕೊಂಡಿದ್ದು, ಈ ಜಿಲ್ಲೆಗಳ ಸಾಕ್ಷರತಾ ಕೇಂದ್ರಗಳು ಹಾಳು ಸುರಿಯತೊಡಗಿವೆ. ಕದ ಮುಚ್ಚಿರುವ ಕಲಿಕಾ ಕೇಂದ್ರಗಳಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ 2009ರಲ್ಲಿ ಮತ್ತೆ ‘ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ’ ಸಾಕ್ಷರತಾ ಕಾರ್ಯಕ್ರಮಗಳಿಗೆ ರೂ. 25 ಸಾವಿರ ವೆಚ್ಚ ಮೀಸಲಿಡುವಂತೆ ಗ್ರಾಮ ಪಂಚಾಯ್ತಿಗಳಿಗೆ ಆದೇಶಿಸಿತ್ತು. ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರದ ಆದೇಶ ಕಡ್ಡಾಯವಾಗಿ ಪಾಲಿಸುವಂತೆ ಗ್ರಾಮ ಪಂಚಾಯ್ತಿಗಳಿಗೆ ಜ್ಞಾಪನಾ ಪತ್ರ ಹೊರಡಿಸಿದ್ದರು. ಆದರೆ, ಗ್ರಾಮ ಪಂಚಾಯ್ತಿಗಳು ಮಾತ್ರ ಇದುವರೆಗೂ ಸಾಕ್ಷರತಾ ಕಾರ್ಯಕ್ರಮಗಳಿಗೆ ಬಿಡಿಗಾಸು ನೀಡದೇ ಅಸಹಕಾರ ತೋರಿಸಿವೆ! ಹೀಗಾಗಿ, ಜಿಲ್ಲೆಗಳಲ್ಲಿ ಸಾಕ್ಷರತಾ ಕಾರ್ಯಕ್ರಮ ಜಾರಿಯಲ್ಲಿದ್ದರೂ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಹಿಂದುಳಿದ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ 17 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ‘ಸಾಕ್ಷರತಾ ಭಾರತ್’ ಯೋಜನೆ ಜಾರಿಗೊಳಿಸಿದೆ. ಅಲ್ಲಿ ಪ್ರೇರಕರು, ಉಪ ಪ್ರೇರಕರು ಕಲಿಕಾರ್ಥಿಗಳಿಗೆ ಅಕ್ಷರಭ್ಯಾಸ ಮಾಡಿಸುತ್ತಿದ್ದಾರೆ. ಪ್ರೇರಕರಿಗೆ ಗೌರವ ಧನ ಸಿಗುತ್ತಿದೆ. ಆದರೆ, ಹಿಂದುಳಿದ ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಸಾಕ್ಷರತಾ ಕಲಿಕಾ ಕೇಂದ್ರಗಳು ‘ಅಕ್ಷರ ಕ್ರಾಂತಿ’ ಮಾಡುವ ಮೊದಲೇ ಕತ್ತಲ ಕೂಪದಲ್ಲಿ ಮುಳುಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.