ಧಾರವಾಡ: ಕರ್ನಾಟಕ ವಿವಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿತರಾಗಿರುವ ಕುಲಪತಿ ಡಾ. ಎಚ್.ಬಿ.ವಾಲಿಕಾರ ಅವರಿಗೆ ಜಾಮೀನು ನೀಡಲು ಲೋಕಾಯುಕ್ತ ಕೋರ್ಟ್ ಗುರುವಾರ ನಿರಾಕರಿಸಿದೆ.
ಇಲ್ಲಿನ ಲೋಕಾಯುಕ್ತ ನ್ಯಾಯಾಲಯ ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಕುಲಪತಿಯವರೊಂದಿಗೆ ಬಂಧಿತರಾಗಿರುವ ಇತರ ಮೂವರು ಆರೋಪಿಗಳಾದ ಹಣಕಾಸು ಅಧಿಕಾರಿ ರಾಜಶ್ರೀ, ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಎಚ್.ಟಿ.ಪೋತೆ, ಕುಲಪತಿಯ ಆಪ್ತ ಸಹಾಯಕ ಶಿವಾನಂದ ಬೀಳಗಿ ಅವರಿಗೆ ಜಾಮೀನು ನೀಡಿದೆ.
ಪ್ರಕರಣದ ಹಿನ್ನೆಲೆ: ಕರ್ನಾಟಕ ವಿವಿಯಲ್ಲಿ 2010ರಿಂದ ಈಚೆಗೆ ಅಂಕಪಟ್ಟಿ ಹಗರಣ, ನೇಮಕಾತಿ ಹಗರಣ ಸೇರಿದಂತೆ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕುಲಪತಿ ಡಾ. ವಾಲಿಕಾರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿತ್ತು. ದೂರುಗಳ ಕುರಿತು ತನಿಖೆ ನಡೆಸಲು ರಾಜ್ಯಪಾಲರು ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ನೇತೃತ್ವದ ಆಯೋಗ ರಚಿಸಿ, 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದರು.