ಸುವರ್ಣ ವಿಧಾನಸೌಧ (ಬೆಳಗಾವಿ): ಕಾಂಗ್ರೆಸ್ ಮುಖಂಡರು ಸದನದಲ್ಲಿ ಧರಣಿ ಮಾಡುವುದನ್ನು ಬಿಟ್ಟು ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿಯನ್ನು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಗುರುವಾರ ಇಲ್ಲಿ ಹೇಳಿದರು.
ದಿನದ ಕಲಾಪ ಮುಂದೂಡಿದ ಬಳಿಕ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, `ಕಾವೇರಿ ವಿಷಯದಲ್ಲಿ ಕಾಂಗ್ರೆಸ್ನವರು ರಾಜಕಾರಣ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.
ವಿಧಾನಸಭೆಯಲ್ಲಿ ಧರಣಿ ಮಾಡುವ ಬದಲು ದೆಹಲಿಗೆ ಹೋಗಿ ಪ್ರಧಾನಿಯನ್ನು ಭೇಟಿ ಮಾಡಲಿ. ಅವರಿಗೆ ವಾಸ್ತವ ಸ್ಥಿತಿ ಏನು? ನೀರು ಇಲ್ಲದಿದ್ದರೆ ಆ ಭಾಗದ ಜನ ದಂಗೆ ಏಳುತ್ತಾರೆ ಎಂಬುದನ್ನು ಕಾಂಗ್ರೆಸ್ ಮುಖಂಡರು ಮನವರಿಕೆ ಮಾಡಲಿ ಎಂದರು.