ಕಲಬುರ್ಗಿ: ಕೆಪಿಎಸ್ಸಿ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್ ಆ್ಯಪ್ ಮೂಲಕ ಸೋರಿಕೆ ಮಾಡಿಕೊಂಡು, ಮೈಕ್ರೊಫೋನ್ ಮೂಲಕ ಸರಿ ಉತ್ತರ ನೀಡುತ್ತಿದ್ದ ಜಾಲದ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಈ ಮೊದಲು ಚಂದ್ರಕಾಂತ ಹರಳಯ್ಯ, ಭೀಮರಾಯ ಹೂವಿನಹಳ್ಳಿ, ತಮಜೀತ್ ಪಟೇಲ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಿಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರೆಹನಾ ಬೇಗಂ, ಡಾ.ಹುಮೇರಾ ಬೇಗಂ ಅವರನ್ನು ಬಂಧಿಸಲಾಗಿದ್ದು, ಅವರು ನಿರೀಕ್ಷಣಾ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಏಳು ಆರೋಪಿಗಳಾದ ಮೈಮುದ್ ನದಾಫ್, ನಾಗರಾಜ ಟೆಂಗಳಿ, ಡಾ. ಕಾಮ್ರಾನ್ ಕೈಸರ್, ಅಬ್ದುಲ್ ನಜೀಬ್, ಹಜರತ್ ಅಲಿ ನದಾಫ್, ಇಮಾಮಸಾಬ ನದಾಫ್, ನಾಸೀರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ.
ಬಂಧಿತರು ಎರಡು ಕಾರು, ಆರು ರಾಯಲ್ ಎನ್ಫೀಲ್ಡ್ ಬೈಕ್, ಒಂದು ಫ್ಲ್ಯಾಟ್ ಖರೀದಿಸಿದ್ದು, ವಿದೇಶ ಪ್ರವಾಸ ಕೈಗೊಂಡಿದ್ದರು ಎಂದು ತಿಳಿಸಿದರು.