ಬೆಂಗಳೂರು: ‘ಸಿ’ ವರ್ಗದ 51 ಗಣಿಗಳನ್ನು ಹರಾಜು ಮಾಡುವಾಗ ಬಿಡ್ದಾರರ ಅರ್ಹತೆ ನಿಗದಿ ಮಾಡುವ ಸಂಬಂಧ ಸುಪ್ರೀಂಕೋರ್ಟ್ನಿಂದ ಸ್ಪಷ್ಟನೆ ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
‘ಇ–ಹರಾಜಿನ ಮೂಲಕ ‘ಸಿ’ ವರ್ಗದ ಗಣಿಗಳನ್ನು ಹರಾಜು ಮಾಡಬೇಕು. ಅತಿ ಹೆಚ್ಚು ದರ ನಮೂದಿಸುವ ಬಿಡ್ದಾರರಿಗೆ ಗಣಿ ಗುತ್ತಿಗೆ ನೀಡಬೇಕು. ಅದಿರು ಮಾರಾಟಗಾರರು ಮತ್ತು ರಫ್ತುದಾರರಿಗೆ ಗುತ್ತಿಗೆ ನೀಡಬಾರದು. ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಅಂತಿಮ ಬಳಕೆದಾರರಿಗೆ ಗಣಿ ಗುತ್ತಿಗೆ ದೊರೆಯಬೇಕು’ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿತ್ತು.
‘ಸುಪ್ರೀಂಕೋರ್ಟ್ನ ತೀರ್ಪಿನಂತೆಯೇ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಆದರೆ, ತೀರ್ಪಿನಲ್ಲಿ ‘ಅಂತಿಮ ಬಳಕೆದಾರರು’ ಎಂಬ ಉಲ್ಲೇಖವಿದೆ. ಅದಿರಿನ ಅಂತಿಮ ಬಳಕೆದಾರರು ರಾಜ್ಯಕ್ಕೆ ಸೀಮಿತ ಆಗಿರಬೇಕೆ ಅಥವಾ ದೇಶದ ಎಲ್ಲ ರಾಜ್ಯಗಳ ಕಬ್ಬಿಣ ಮತ್ತು ಉಕ್ಕು ಉತ್ಪಾದಕರಿಗೂ ಅವಕಾಶ ನೀಡಬಹುದೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ನಿಂದಲೇ ಸ್ಪಷ್ಟನೆ ಕೋರಲು ನಿರ್ಧರಿಸಲಾಗಿದೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಚಿವ ಸಂಪುಟ ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.