ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಶ್ರೀರಾಮಸೇನೆ ಸೇರಿದಂತೆ ಯಾವ ಹಿಂದೂ ಸಂಘಟನೆಗಳಿಗೂ ಸಂಬಂಧ ಇಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದರು.
ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತ್ರ ಬಹಿರಂಗಗೊಳಿಸಲು ಹಿಂದೂ ಜನಜಾಗೃತಿ ಸಮಿತಿ ಹಮ್ಮಿಕೊಂಡಿದ್ದ ಜನಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರಾರಂಭದಿಂದಲೇ ಗೌರಿ ಹತ್ಯೆ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ. ದಾಬೊಲ್ಕರ್, ಪಾನ್ಸಾರೆ, ಗೌರಿ ಹತ್ಯೆಗಳಾದಾಗ ಕಾಂಗ್ರೆಸ್ ಆಡಳಿತ ಇತ್ತು. ಆದರೆ, ಬುದ್ಧಿಜೀವಿಗಳು ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ನಾಯಿ ಸತ್ತರೆ ಮೋದಿ ಉತ್ತರ ಕೊಡಬೇಕೇ? ವೈಚಾರಿಕತೆಯಲ್ಲಿ ನಮ್ಮ ವಿರೋಧವಿದೆಯೇ ಹೊರತು ನಾವು ಕೊಲೆಗಡುಕರಲ್ಲ. ಹಿಂಸೆಯಲ್ಲಿ ನಂಬಿಕೆ ಇಟ್ಟಿಲ್ಲ’ ಎಂದು ಮುತಾಲಿಕ್ ಹೇಳಿದರು.
ಹೈಕೋರ್ಟ್ ವಕೀಲ ಅಮೃತೇಶ್ ಮಾತನಾಡಿ, 'ರಾಜ್ಯದಲ್ಲಿ ಇನ್ನು ಮುಂದೆ ಪೊಲೀಸರು, ಎಸ್ಐಟಿ, ಸಿಬಿಐ, ಸಿಸಿಬಿ, ನ್ಯಾಯಾಂಗ ಯಾರೇ ಉಡಾಫೆಯಾಗಿ ನಡೆದರೂ ಹಿಂದೂ ಜನಜಾಗೃತಿ ಸಮಿತಿ ಸುಮ್ಮನಿರುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.