ಶಿರಸಿ: ಉತ್ತರ ಕನ್ನಡ ಜಿಲ್ಲೆಯ ನೆತ್ತಿಯ ಮೇಲೆ ಮತ್ತೆ ಕಿರು ಜಲವಿದ್ಯುತ್ ಯೋಜನೆಯ ಕತ್ತಿ ತೂಗಲಾರಂಭಿಸಿದೆ. ಜಿಲ್ಲೆಯಲ್ಲಿ 28 ಕಿರು ಜಲವಿದ್ಯುತ್ ಯೋಜನೆಗಳ ಪ್ರಸ್ತಾವವಿದ್ದು, ಏಳನ್ನು ರದ್ದುಗೊಳಿಸಿ ಉಳಿದ 21 ಯೋಜನೆಗಳನ್ನು ಸರ್ಕಾರ ಖಾಸಗಿ ಕಂಪೆನಿಗಳಿಗೆ ಹಂಚಿಕೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಈ ವಿಷಯ ಬಹಿರಂಗಗೊಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಅವರು ನವೆಂಬರ್ 28ರಂದು ಸದನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ, 2003ರಿಂದ 2010 ಅವಧಿಯಲ್ಲಿ 28 ಕಿರು ಜಲ ವಿದ್ಯುತ್ ಯೋಜನೆ ಸ್ಥಾಪನೆಗೆ ಖಾಸಗಿ ಕಂಪೆನಿಗಳು ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರ 21 ಯೋಜನೆಗಳನ್ನು ಹಂಚಿಕೆ ಮಾಡಿದೆ. 11 ಹೊಸ ಯೋಜನೆಗಳು ಪರಿಶೀಲನೆಯಲ್ಲಿವೆ ಎಂಬ ವಿವರ ನೀಡಿದ್ದಾರೆ.
ಕಿರು ವಿದ್ಯುತ್ ಉತ್ಪಾದನಾ ಸ್ಥಾವರಗಳ ಹಂಚಿಕೆಯ ನಂತರದಲ್ಲಿ ಅನುಷ್ಠಾನಗೊಳಿಸಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಗ್ರಾಮ ಪಂಚಾಯ್ತಿಗಳ ಅನುಮತಿ ಪಡೆಯಲಾಗುತ್ತದೆ.
ಯೋಜನೆ ಅನುಷ್ಠಾನದಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಇಂಧನ ಇಲಾಖೆಯಿಂದ ಯಾವುದೇ ಅಧ್ಯಯನ ನಡೆಸಲಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯು ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವುದರಿಂದ ಯೋಜನೆಗಳನ್ನು ಹಂಚಿಕೆ ಮಾಡುವ ಪೂರ್ವದಲ್ಲಿ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದು, ನಂತರ ಹಂಚಿಕೆಯನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದ್ದಾರೆ.
ಹಳ್ಳಿಗರಲ್ಲಿ ಆತಂಕ: ಜೊಯಿಡಾ ತಾಲ್ಲೂಕಿನ ದಬೇವಾಡಿ, ಮಾವಳಂಗಿ, ಕ್ಯಾಸಲ್ರಾಕ್, ಯಲ್ಲಾಪುರ ತಾಲ್ಲೂಕಿನ ಕೆಳಾಸಿ, ದುಗ್ಗನಬೈಲು, ಕಣ್ಣಿಗೇರಿ, ದಬ್ಬೇಸರ, ಕಿಲಾರಗದ್ದೆ, ರಾಮನಗರ, ದೇವಿಜಡ್ಡಿ, ದುಗ್ಗನಬೈಲು, ಜಕೆಕುಂಬ್ರಿ, ಭಟ್ಕಳ ತಾಲ್ಲೂಕಿನ ಹಲ್ಲುಕ್ಕಿ, ಅಂಕೋಲಾ ತಾಲ್ಲೂಕಿನ ಭೈರೆಕೊಪ್ಪ, ಹೊಸಕಂಬಿ, ಗದ್ದೆಹಳ್ಳಿ, ಕೋಟೆಬಾವಿ, ಕೊಂಕಿ, ಶಿರಸಿ ತಾಲ್ಲೂಕಿನ ಮುಸ್ಕಿ, ನರಸಕಲ್, ಹೊಸೂರು, ಗಣೇಶಪಾಲ್ ಗ್ರಾಮಗಳಲ್ಲಿ ಪ್ರಸ್ತಾಪಿತ ಕಿರು ಜಲ ವಿದ್ಯುತ್ ಯೋಜನೆಗಳನ್ನು ರಾಜ್ಯ ಸರ್ಕಾರ 19 ಖಾಸಗಿ ಕಂಪೆನಿಗಳಿಗೆ ಹಂಚಿಕೆ ಮಾಡಿದೆ. ಜಿಲ್ಲೆಯಲ್ಲಿ ಹರಿಯುವ ಕಾಳಿ, ಗಂಗಾವಳಿ, ಬೇಡ್ತಿ ನದಿಗಳು ಹಾಗೂ ಇವುಗಳ ಉಪನದಿಗಳು, ಹಳ್ಳಗಳಿಗೆ ಕಿರು ಅಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ.
ಕಿರು ಜಲವಿದ್ಯುತ್ ಯೋಜನೆ ಪ್ರಸ್ತಾವ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಪುನರಾವರ್ತನೆಯಾಗುವ ಕಿರು ಜಲ ವಿದ್ಯುತ್ ಯೋಜನೆಯ ಪ್ರಸ್ತಾವದಿಂದ ಹಳ್ಳಿಗರು ಆತಂಕಕ್ಕೆ ಒಳಗಾಗಿದ್ದಾರೆ. ಏಳು ತಿಂಗಳ ಹಿಂದೆ ಶಿರಸಿ ತಾಲ್ಲೂಕಿನ ಗಣೇಶಪಾಲ್ನಲ್ಲಿ ಪ್ರಸ್ತಾಪಿತ ಯೋಜನೆ ಸಮೀಕ್ಷೆಗೆ ಬಂದಿದ್ದ ಕಾರೆ ಪವರ್ ರಿಸೋರ್ಸ್ಸ್ ಕಂಪೆನಿಯ ಪ್ರತಿನಿಧಿಗಳಿಗೆ ಸರ್ವೆ ನಡೆಸಲು ಅವಕಾಶ ನೀಡದೇ ಸ್ಥಳೀಯರು ವಾಪಸ್ ಕಳುಹಿಸಿದ್ದರು. ಮತ್ತೆ ಇದೇ ಕಂಪೆನಿಯವರು ಗುರುವಾರ ಗಣೇಶಪಾಲ್ಗೆ ಬಂದು ಸರ್ವೆ ನಡೆಸಲು ಪ್ರಯತ್ನಿಸಿದ್ದಾರೆ.
ಹೇಗೆ ಸಾಧ್ಯ?
ಡಾ.ಕಸ್ತೂರಿರಂಗನ್ ವರದಿಯು ಗುರುತಿಸಿರುವ ಪಶ್ಚಿಮಘಟ್ಟ ಸೂಕ್ಷ್ಮವಲಯ ಪ್ರದೇಶದಲ್ಲಿ ಉತ್ತರ ಕನ್ನಡ ಜಿಲ್ಲೆ ಸಹ ಒಳಗೊಂಡಿದೆ. ಪ್ರಸ್ತಾಪಿತ ಎಲ್ಲ ಯೋಜನೆಗಳು ಸೂಕ್ಷ್ಮವಲಯ ವ್ಯಾಪ್ತಿಯಲ್ಲಿ ಬರುತ್ತವೆ. ಅಲ್ಲದೇ ಪಶ್ಚಿಮಘಟ್ಟದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲವೆಂದು ಈ ಹಿಂದೆಯೇ ಸರ್ಕಾರ ಹೈಕೋರ್ಟ್ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಆದರೆ ಈಗ ಸರ್ಕಾರವೇ ಕಿರು ವಿದ್ಯುತ್ ಯೋಜನೆ ಹಂಚಿಕೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.