ಜನವಾಡ (ಬೀದರ್ ಜಿಲ್ಲೆ): ‘ಜಾತ್ಯತೀತ ಜನತಾ ದಳದವರಿಗೆ ಮದುವೆ ಊಟಕ್ಕಿಂತ ತಿಥಿ ಊಟವೇ ಹೆಚ್ಚು ಇಷ್ಟ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬೀದರ್ ತಾಲ್ಲೂಕಿನ ಜನವಾಡದಲ್ಲಿ ಭಾನುವಾರ ಬೀದರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಜೆಡಿಎಸ್ನದ್ದು ಮನೆ ಮುರುಕು ಕೆಲಸ. ತಾವಂತೂ ಗೆಲ್ಲುವುದಿಲ್ಲ. ಬೇರೆ ಜಾತ್ಯತೀತ ಪಕ್ಷ ಗೆಲ್ಲಬಾರದು ಎನ್ನುವುದು ಅವರ ಉದ್ದೇಶ. ಕಾರಣ ಜಾತ್ಯತೀತ ಮತಗಳು ವಿಭಜನೆ ಆಗದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.
‘ವಿಧಾನಸಭೆ ಅಧಿವೇಶನದಲ್ಲಿಯೇ ನೀಲಿ ಚಿತ್ರ ವೀಕ್ಷಿಸುವ ಮೂಲಕ ಬಿಜೆಪಿಯವರು ದೇಶದ ಸಂಸ್ಕೃತಿ, ಮಾನ, ಮರ್ಯಾದೆ ಹರಾಜು ಮಾಡಿ ದ್ದಾರೆ. ಮುಖ್ಯಮಂತ್ರಿಯಾಗಿದ್ದ ಆ ಪಕ್ಷದ ಯಡಿಯೂರಪ್ಪ ಸೇರಿ 13 ಜನ ಜೈಲಿಗೆ ಹೋಗಿ ಬಂದಿದ್ದಾರೆ’ ಎಂದರು.
‘ಕಾಂಗ್ರೆಸ್ ಬಡವರು, ಶೋಷಿತರು, ಹಿಂದುಳಿದವರ ಹಿತ ಬಯಸುವ ಪಕ್ಷ. ಬಿಜೆಪಿ ಶ್ರೀಮಂತರು ಹಾಗೂ ಬಂಡವಾಳಶಾಹಿಗಳ ಪರವಾಗಿದೆ’ ಎಂದು ಹೇಳಿದರು.