ಗೌರಿಬಿದನೂರು: `ಬಿಜೆಪಿಯಲ್ಲಿ ಪಕ್ಷದ ಸಂಸ್ಕೃತಿ ಗೊತ್ತಿಲ್ಲದ ಕೆಲ ಜೊಳ್ಳು ನಾಯಕರಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಆ ಎಲ್ಲ ಜೊಳ್ಳು ನಾಯಕರನ್ನು ಹೊರ ಹಾಕಿ, ಗಟ್ಟಿ ಕಾಳುಗಳನ್ನು ಮಾತ್ರವೇ ಆಯ್ದುಕೊಂಡು ಸಮರ್ಥವಾಗಿ ಚುನಾವಣೆ ಎದುರಿಸುತ್ತೇವೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಬಿಜೆಪಿ ತಾಲ್ಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, `ಪಕ್ಷದ ಸಂಸ್ಕೃತಿ ಗೊತ್ತಿಲ್ಲದ ಮತ್ತು ಬದ್ಧತೆಯಿಲ್ಲದ ಕೆಲವಷ್ಟು ಜೊಳ್ಳು ನಾಯಕರಿದ್ದಾರೆ. ಅಧಿಕಾರಕ್ಕಾಗಿ ಕಿತ್ತಾಡುವವರು ಇದ್ದಾರೆ. ಅಂಥವರನ್ನೆಲ್ಲ ಹೊರ ಹಾಕಿ ಗಟ್ಟಿಕಾಳುಗಳನ್ನು ಮಾತ್ರವೇ ಆಯ್ದುಕೊಳ್ಳುತ್ತೇವೆ. ಅಂತಹವರಿಕೆ ಮಾತ್ರ ಚುನಾವಣೆಯಲ್ಲಿ ಟಿಕೆಟ್ ನೀಡಿ ಸ್ಪರ್ಧೆಗೆ ಇಳಿಸಲಾಗುವುದು~ ಎಂದರು.
`ಬಿಜೆಪಿಯಲ್ಲಿನ ಗೊಂದಲದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಹತ್ತು-ಹದಿನೈದು ದಿನಗಳಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ. ಒಂದು ವೇಳೆ ಡಿಸೆಂಬರ್ನಲ್ಲಿ ಚುನಾವಣೆ ನಡೆದರೂ ನಮ್ಮ ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಿದ್ದಾರೆ. 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ~ ಎಂದು ಅವರು ಹೇಳಿದರು.