ಮೈಸೂರು: ‘ಪಂಪ ಪ್ರಶಸ್ತಿಯನ್ನು ದಸರಾ ಮಹೋತ್ಸವದಲ್ಲಿ ಸ್ವೀಕರಿಸುವುದಿಲ್ಲ. ಹೀಗೆಯೇ ಮನೆಗೆ ಬಂದು ಕೊಟ್ಟರೂ ಸ್ವೀಕರಿಸುವೆ’ ಎಂದು ಹಿರಿಯ ವಿಮರ್ಶಕ ಜಿ.ಎಚ್. ನಾಯಕ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಶುಕ್ರವಾರ ತಿಳಿಸಿದರು.
ಮಾನಸಗಂಗೋತ್ರಿಯಲ್ಲಿ ಏರ್ಪಡಿಸಿದ್ದ ‘ವಚನ ಚಳವಳಿ ಮತ್ತು ಶ್ರಮ ಸಂಸ್ಕೃತಿ’ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ನಂತರ ಉಮಾಶ್ರೀ ಅವರು, ‘ಜಿ.ಎಚ್. ನಾಯಕ ಅವರ ಮನೆಗೆ ತೆರಳಿ ಅ. 5ರಂದು ಸಂಜೆ ದಸರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭ ನಡೆಯಲಿದೆ.
ಅಂದು ‘ಪಂಪ’ ಪ್ರಶಸ್ತಿ ಸ್ವೀಕರಿಸಿ’ ಎಂದು ಕೋರಿದಾಗ ದಸರಾ ಕುರಿತು ನಿಲುವು ಬದಲಿರುವುದರಿಂದ ಸ್ವೀಕರಿಸುವುದಿಲ್ಲವೆಂದು ಹೇಳಿದರು. ‘ದಸರಾವನ್ನು ನಾಡಹಬ್ಬವೆಂದು ಕರೆಯುತ್ತಾರೆ. ಆದರೆ ಅದು ನಾಡಹಬ್ಬವಾಗುವುದಿಲ್ಲ. ಚಾಮುಂಡಿ ದೇವಿಯನ್ನು ಮಾತ್ರ ಮೆರೆಸುವುದು ದಸರಾ ಆಗುವುದಿಲ್ಲ ಎಂದು ಹಿಂದೆಯೇ ಹೇಳಿರುವೆ. ಹೀಗೆ ದಸರಾ ವಿರೋಧಿಸುತ್ತಲೇ ಬಂದಿರುವೆ. ಹೀಗಿರುವಾಗ ದಸರಾ ಮಹೋತ್ಸವದಲ್ಲಿ ‘ಪಂಪ’ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಉಮಾಶ್ರೀ ಅವರಿಗೆ ಹೇಳಿರುವೆ’ ಎಂದು ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.
2010ರಲ್ಲಿ ಸೃಜನೇತರ ಸಾಹಿತ್ಯ ಕೊಡುಗೆಯೆಂದು ಅವರಿಗೆ ರಾಜ್ಯ ಸರ್ಕಾರ ‘ಪಂಪ’ ಪ್ರಶಸ್ತಿ ಘೋಷಿಸಿತು. ಪ್ರಶಸ್ತಿ ಪ್ರದಾನ ಸಮಾರಂಭ ಇನ್ನೆರಡು ದಿನಗಳಿರುವಾಗ ಟೆಲಿಗ್ರಾಂ ಮೂಲಕ
ತಿಳಿಸಿದಾಗ ನಾಯಕ ಅವರು ವಿರೋಧಿ ಸಿದ್ದರು. ‘ಕಾರ್ಯಕ್ರಮದ ಆಹ್ವಾನಪತ್ರ ಇರಲಿಲ್ಲ. ದಿಢೀರ್ ಬನ್ನಿ ಎಂದು ಕರೆದರೆ ಸರ್ಕಾರಕ್ಕೂ ಗೌರವವಿಲ್ಲ ಎಂದು ಹೋಗಿ ರಲಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭ ಹಾಗೆಯೇ ಉಳಿಯಿತು’ ಎಂದು ಅವರು ವಿವರಿಸಿದರು.
ಬೆಳ್ಳಿಹಬ್ಬಕ್ಕೆ ಹೊಸ ನಾಟಕ: ಉಮಾಶ್ರೀ